ಕಾರವಾರ: ಶ್ವಾಸಕೋಶ ಸಮಸ್ಯೆಯಿಂದ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಜನಪದ ಕಲಾವಿದೆ ಅಂಕೋಲಾದ ಸುಕ್ರಿ ಬೊಮ್ಮಗೌಡ ಗುಣಮುಖರಾಗಿದ್ದು, ಗುರುವಾರ ಆಸ್ಪತ್ರೆಯಿಂದ ಅಂಕೋಲಾದ ಬಡಗೇರಿಯ ಮನೆಗೆ ತೆರಳಿದರು.
‘ಸುಕ್ರಜ್ಜಿಗೆ ಮೂರು ದಿನಗಳಿಗೆ ಆಗುವಷ್ಟು ಔಷಧ ನೀಡಲಾಗಿದೆ. ಇದರಿಂದ ನ್ಯುಮೋನಿಯಾ ಕಾಯಿಲೆ ಸಂಪೂರ್ಣ ವಾಸಿಯಾಗಲಿದೆ. ಇನ್ನು ಅವರ ಶ್ವಾಸಕೋಶ ನಿಶ್ಶಕ್ತಗೊಂಡಿದ್ದು, ಅದಕ್ಕೆ ದೀರ್ಘ ಕಾಲದ ಚಿಕಿತ್ಸೆ ಅಗತ್ಯ’ ಎಂದು ವೈದ್ಯ ಡಾ.ಅಮಿತ್ ಕಾಮತ್ ಹೇಳಿದರು.
‘ಚಿಕಿತ್ಸೆಗೆ ಸಂಪೂರ್ಣ ಸಹಕಾರ ನೀಡಿದ್ದರಿಂದ ಸುಕ್ರಿ ಅವರು ಬೇಗ ಗುಣಮುಖರಾಗಲು ಸಾಧ್ಯವಾಯಿತು’ ಎಂದು ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಳಕರ್ ತಿಳಿಸಿದರು.
ಕೃತಜ್ಞತೆ: ಸುಕ್ರಿ ಅವರು ಆಸ್ಪತ್ರೆಯಿಂದ ಹೊರಡುವ ವೇಳೆ ‘ಅಜ್ಜಿಯ ಬಾಯೊಳು ಹಲ್ಲಿಲ್ಲ... ಮೊಸರು ಅವಲಕ್ಕಿ..’ ಎಂಬ ಜನಪದ ಗೀತೆ ಹಾಡಿದರು. ಅಲ್ಲದೇ ಆರೈಕೆ ಮಾಡಿದ ವೈದ್ಯರು, ಸಿಬ್ಬಂದಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು. ಬಳಿಕ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ತಮ್ಮ ಕಾರಿನಲ್ಲಿ ಅವರನ್ನು ಊರಿಗೆ ಕರೆದೊಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.