ADVERTISEMENT

ಉತ್ತರ ಕನ್ನಡಕ್ಕೆ ಸಿ.ಎಂ ಭೇಟಿ ಇಂದು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:33 IST
Last Updated 6 ಡಿಸೆಂಬರ್ 2017, 8:33 IST

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 6 ಮತ್ತು 7ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ₹ 2,468 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಕಟ್ಟಡಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸಿ.ಎಂ ಪ್ರವಾಸದ ನಿಮಿತ್ತ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ಕೆಲ ದಿನಗಳ ಹಿಂದೆ ಕಾರವಾರದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಬಳಿಕ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮೊದಲ ಹಂತದ ಸಭೆ ನಡೆಸಿದ್ದಾರೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಆಯಾ ಕ್ಷೇತ್ರಗಳ ಶಾಸಕರು ಸೇರಿ ಎರಡನೇ ಸುತ್ತಿನ ಸಭೆ ನಡೆಸಿದ್ದಾರೆ.

ಹೆಲಿಪ್ಯಾಡ್ ವ್ಯವಸ್ಥೆ: ಸಿದ್ದರಾಮಯ್ಯ ಅವರು ಜಿಲ್ಲೆ ಯ 6 ಕಡೆಗಳಲ್ಲಿ ಸಭೆ ನಡೆಸಲಿದ್ದು, ಎಲ್ಲೆಡೆ ಹೆಲಿಕಾಪ್ಟರ್ ಮೂಲಕವೇ ಪಯಣಿಸುವರು. ಇದರಿಂದ ಅವರ ಕಾರ್ಯಕ್ರಮವಿರುವ ಭಟ್ಕಳ, ಕುಮಟಾ, ಕಾರವಾರ, ಶಿರಸಿ ಹಾಗೂ ಮುಂಡಗೋಡಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ.

ADVERTISEMENT

ಸಿ.ಎಂ ತಾತ್ಕಾಲಿಕ ಟಿ.ಪಿಯ ಪ್ರಕಾರ ಡಿ.6 ರಂದು ಬೆಳಿಗ್ಗೆ 9.25ಕ್ಕೆ ಬೆಂಗಳೂರಿನಿಂದ ಹೊರಟು 11.25 ಕ್ಕೆ ಭಟ್ಕಳ ತಲುಪುವರು. ಅಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಹಾಗೂ ಬಹಿರಂಗ ಸಭೆ ನಡೆಸಿ, ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1.20 ಕ್ಕೆ ಕುಮಟಾಕ್ಕೆ ಬರುವರು. ಅಲ್ಲಿಂದ ಸಂಜೆ 5 ಕ್ಕೆ ಕಾರವಾರಕ್ಕೆ ಬಂದು ಮಯೂರವರ್ಮ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸುವರು. ನಂತರ ವೈದ್ಕಕೀಯ ಕಾಲೇಜಿಗೆ ಭೇಟಿ ನೀಡುವರು. ರಾತ್ರಿ ಬೆಲ್ಸ್ ಬಂಗ್ಲೊ ಸಮೀಪವಿರುವ ಪಿಡಬ್ಲ್ಯೂಡಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡುವರು.

7 ರಂದು ಬೆಳಿಗ್ಗೆ 10 ಗಂಟೆಗೆ ಶಿರಸಿಗೆ ತೆರಳಿ ಕಾರ್ಯಕ್ರಮ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಮುಂಡಗೋಡಿಗೆ ತೆರಳಲಿದ್ದು, ಸಂಜೆ 4 ಗಂಟೆಗೆ ಹಳಿಯಾಳಕ್ಕೆ ತೆರಳಿ ಅಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 5 ಗಂಟೆಗೆ ಕಾರಿನ ಮೂಲಕ ಹುಬ್ಬಳ್ಳಿಗೆ ತೆರಳುವರು. ಸಿಎಂ ಜತೆಗೆ ನಾಲ್ವರು ಸಚಿವರು ಬರಲಿದ್ದು, ಅವರಿಗೂ ವಾಸ್ತ ವ್ಯದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.