ಜೋಯಿಡಾ: ‘ಜೋಯಿಡಾ ವಲಯ ವ್ಯಾಪ್ತಿಯ ನಗರಿಯಲ್ಲಿ ಅರಣ್ಯ ಇಲಾಖೆಯಿಂದ ಕಳ್ಳಬೇಟೆ ನಿಗ್ರಹ ದಳದ ಕ್ಯಾಂಪ್ ನಿರ್ಮಿಸಬಾರದು. ಗ್ರಾಮಸ್ಥರ ಮನವಿಗೆ ಇಲಾಖೆ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಕಾಳಿ ಬ್ರಿಗೇಡ್ ಎಚ್ಚರಿಸಿದೆ.
‘ಕಾಳಿ ಹುಲಿ ಯೋಜನಾ ಪ್ರದೇಶದಲ್ಲಿ ಕಳ್ಳಬೇಟೆ ನಿಗ್ರಹ ದಳದ ಕ್ಯಾಂಪ್ಗಳನ್ನು ಅಲ್ಲಲ್ಲಿ ನಿರ್ಮಿಸಿ ಕಾಡಿನ ಮತ್ತು ಕಾಡು ಪ್ರಾಣಿಗಳ ರಕ್ಷಣೆ ಮಾಡುವುದಾಗಿ ಹೇಳಲಾಗಿದೆ. ಅಲ್ಲಿ ಕಾವಲುಗಾರರನ್ನು ನೇಮಿಸದೇ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ನುಂಗುವ ಹುನ್ನಾರ ಅಡಗಿದೆ. ಈಗ ಇದೇ ತಂತ್ರವನ್ನು ಕಾಯ್ದಿಟ್ಟ ಅರಣ್ಯ ಪ್ರದೇಶದ ಜೊಯಿಡಾ ವಲಯದ ನಗರಿ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಕ್ಯಾಂಪ್ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಕ್ಯಾಂಪ್ ಅಗತ್ಯವು ಇಲ್ಲ’ ಎಂದು ಕಾಳಿ ಬ್ರಿಗೇಡ್ ಮುಖಂಡ ರವಿ ರೆಡಕರ ಅವರ ಆರೋಪಿಸಿದ್ದಾರೆ.
‘ಅರಣ್ಯ ಇಲಾಖೆಯಿಂದ ಯಾವುದೇ ಕಾಮಗಾರಿಗಳು ನಡೆಯಬೇಕಾದರೆ ಗ್ರಾಮ ಪಂಚಾಯ್ತಿಗಳಿಂದ ಅನುಮತಿ ಪಡೆಯುತ್ತಿಲ್ಲ. ಇದು ಹುಲಿಯೋಜನಾ ಪ್ರದೇಶದಲ್ಲಿಯೂ ಮುಂದುವರಿದಿದೆ. ಈ ನಗರಿ ಗ್ರಾಮದಲ್ಲಿ ನಿರ್ಮಿಸುವ ಕ್ಯಾಂಪಿಗೂ ಗ್ರಾಮ ಪಂಚಾಯ್ತಿಯಿಂದ ಯಾವುದೇ ಪರವಾನಗಿ ಪಡೆಯದೇ ಪ್ರಾರಂಭಿಸಲು ಮುಂದಾಗಿದೆ’ ಎಂದು ರವಿ ರೇಡಕರ ದೂರಿದರು.
ಈ ಸಂದರ್ಭದಲ್ಲಿ ಕೀರ್ತಿಧರ ಹೆಗಡೆ, ಪ್ರಭಾಕರ ದೇಸಾಯಿ, ಸಂದೀಪ ಗಾವಡಾ, ತುಳಸಿದಾಸ ವೆಳಿಪ, ಗಜಾನನ ನಾಯ್ಕ, ಗಣಪತಿ ಗಾವಡಾ, ರಾಘವೇಂದ್ರ ನಾಯ್ಕ, ವಿಷ್ಣು ವೆಳಿಪ, ಬಾಲಕೃಷ್ಣ ಗಾವಡಾ, ಸಂತೋಷ ನಾಯ್ಕ, ಹುಮೊ ಗಾಔಡಾ, ಅಶೋಕ ನಾಯ್ಕ, ನಿಲ್ ರುಜಾರಿಯೊ, ಮಹಾದೇವ ಗಾವಡಾ, ಕೃಷ್ಣಾ ಗಾವಡಾ, ಪರಶುರಾಮ ಗಾವಡಾ, ಪ್ರಕಾಶ ಗಾವಡಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.