ಕಾರವಾರ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರಿಗೆ ನೆರವಾಗುವ ಉದ್ದೇಶದಿಂದ ಕಳೆದ 12 ವರ್ಷಗಳಿಂದ ನಿರ್ಗತಿಕ ಕುಟುಂಬಗಳಿಗೆ ಮಾಸಾಶನ ನೀಡುತ್ತಿದ್ದು, ಈ ಬಾರಿ ಜಿಲ್ಲೆಯ 269 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ’ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಮಂಗಳವಾರ ನಿರ್ಗತಿಕ ಮಹಿಳೆಯರಿಗೆ ಮಾಸಾಶನ ವಿತರಿಸಿ ಮಾತನಾಡಿದರು. ‘ನಿರ್ಗತಿಕರು ಸ್ವಾವಲಂಬಿ ಜೀವನ ಕಲ್ಪಿಸಿಕೊಳ್ಳಲು ಈ ಮಾಸಾಶನದ ಮೂಲಕ ಅವರಿಗೆ ಕಿಂಚಿತ್ತು ಸಹಾಯ ಮಾಡುತ್ತಿದ್ದೇವೆ’ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ ಮಾತನಾಡಿ, ‘ಯೋಜನೆಯು ಪರಿವರ್ತನೆಯನ್ನು ಬಯಸುತ್ತಿದೆ. ಸಂಘಟನೆಯ ಮೂಲಕ ಕೃಷಿಗೆ ಪ್ರೋತ್ಸಾಹ ನೀಡುವುದು, ಸ್ವ-ಉದ್ಯೋಗ ತರಬೇತಿ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವುದರ ಮೂಲಕ ಬಡತನದಲ್ಲಿದ್ದವರಿಗೆ ನೆರವಾಗುತ್ತಿದ್ದೇವೆ’ ಎಂದರು.
‘ಮಾಸಾಶನ ಪಡೆದ ಹಲವು ಮಹಿಳೆಯರು ಅದನ್ನು ತಮ್ಮ ವೈದ್ಯಕೀಯ ಖರ್ಚಿಗಾಗಿ, ಕುಟುಂಬದ ನಿರ್ವಹಣೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಬೇರೆ ಬೇರೆ ಕಾಯಿಲೆಗಳಿಂದ, ಅಪಘಾತದಿಂದ ಪತಿ, ಮಕ್ಕಳನ್ನು ಕಳೆದುಕೊಂಡವರಿಗೆ, ಅಂಗವಿಕಲರಾದವರಿಗೆ ಪ್ರತಿ ತಿಂಗಳು ₹ 750 ರಿಂದ ₹ 1 ಸಾವಿರದವರೆಗೆ ಮಾಸಾಶನ ನೀಡುತ್ತಿದ್ದೇವೆ. ಆಯಾ ಕುಟುಂಬದ ಪರಿಸ್ಥಿತಿಯನ್ನು ಆಧರಿಸಿ ಮಾಸಾಶನದ ಮೊತ್ತವನ್ನು ನಿಗದಿ ಮಾಡಿದ್ದೇವೆ’ ಎಂದು ಹೇಳಿದರು.
* *
ಅಪಘಾತದಲ್ಲಿ ನನ್ನ ಪತಿ ಎರಡೂ ಕಣ್ಣು ಕಳೆದುಕೊಂಡರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ₹ 600 ಮಾಸಾಶನದಿಂದ ಜೀವನ ನಿರ್ವಹಣೆಗೆ ತುಂಬಾ ಸಹಕಾರಿಯಾಗಿದೆ
ರೇಣುಕಾ ಗುನಗಾ
ಫಲಾನುಭವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.