ADVERTISEMENT

ನಕ್ಷೆ ಬದಲಾಯಿಸಿ ರಸ್ತೆ ನಿರ್ಮಾಣ

ಪುರವರ್ಗದ ಗ್ರಾಮಸ್ಥರ ವಿರೋಧ: ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:47 IST
Last Updated 14 ಮಾರ್ಚ್ 2017, 6:47 IST

ಭಟ್ಕಳ: ಅಂತಿಮ ಹಂತದ ತ್ರಿಡಿ ಸರ್ವೆ ನಕಾಶೆಯಂತೆ ರಸ್ತೆ ವಿಸ್ತರಣೆ ಕಾಮಗಾರಿ ಮಾಡುವುದನ್ನು ಬಿಟ್ಟು  ಖಾಸಗಿ ವ್ಯಕ್ತಿಯೊಬ್ಬರ  ತಕರಾರಿನಂತೆ ನಕ್ಷೆಯನ್ನೇ ಬದಲಾಯಿಸಿ ರಸ್ತೆ ನಿರ್ಮಾಣ ಮಾಡುವುದನ್ನು ವಿರೋಧಿಸಿ ಭಟ್ಕಳ ಪುರವರ್ಗದ ಗ್ರಾಮಸ್ಥರು ಸೋಮವಾರ ಉಪವಿಭಾಗಾಧಿಕಾರಿ ಮಂಜುನಾಥ್‌ರಿಗೆ ಮನವಿ ಸಲ್ಲಿಸಿದರು.

ಪುರವರ್ಗ ಗ್ರಾಮದ ಧಾನಿಶ್ ಹೊಟೇಲ್ ಪಕ್ಕದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66 ವಿಸ್ತರಣೆಗಾಗಿ ತ್ರಿಡಿ ಸರ್ವೆಪ್ರಕಾರ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ವಿಸ್ತರಣೆಯಿಂದ ಭೂಮಿ ಕಳೆದುಕೊಳ್ಳುವ ಮಾಲ್ಕೀದಾರರಿಗೆ ಪರಿಹಾರದ ಹಣವೂ ಮಂಜೂರಾಗಿದೆ.

ಹೀಗಿರುವಾಗ ಮಾಲ್ಕೀದಾರ ಪೈಕಿ ಒಬ್ಬರು ರಸ್ತೆಗೆ ತಕರಾರು ಮಾಡಿದ್ದರಿಂದ ಹೆದ್ದಾರಿ ವಿಭಾಗದ ಅಧಿಕಾರಿಗಳು ಇವರ ಜಾಗದ ಗಡಿಯಿಂದ ಹೊರಗೆ ರಸ್ತೆ ನಿರ್ಮಿಸಲು ನಕ್ಷೆಯನ್ನೇ ತಿದ್ದುಪಡಿ ಮಾಡಿ ಗ್ರಾಮಸ್ಥರ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಒತ್ತಡ ಹೇರುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಒಬ್ಬ ವ್ಯಕ್ತಿಯ ಸಲುವಾಗಿ ತ್ರಿಡಿ ಸರ್ವೆ ನಕ್ಷೆಯನ್ನೇ ರದ್ದುಪಡಿಸಲು ಮುಂದಾಗಿ ರುವುದು ಖಂಡನೀಯ ಮತ್ತು ಇದಕ್ಕೆ ಗ್ರಾಮಸ್ಥರ ತಕರಾರು ಇದೆ.
ಒಬ್ಬರ ಜಮೀನನ್ನು ಉಳಿಸಲು ನೂರಾರು ಗ್ರಾಮಸ್ಥರು ಅಂಗಡಿ ಕಟ್ಟಡಗಳು, ಮನೆಗಳು ಮತ್ತು ಜಮೀನುಗಳನ್ನು ಕಳೆದುಕೊಳ್ಳ ಬೇಕಾಗುತ್ತೆ.
ಇದಕ್ಕೆ ಅವಕಾಶ ಕೊಡದೇ ಮೊದಲಿನಂತೆ ತ್ರಿಡಿ ನಕ್ಷೆಯ ಪ್ರಕಾರವೇ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾ ಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಜಿಲ್ಲಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೂ ಮನವಿಯನ್ನು ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಶಂಕರ ನಾಯ್ಕ, ರಾಘುನಾಯ್ಕ, ಮಂಜುನಾಥ ನಾಯ್ಕ, ಈರಪ್ಪ ಆಚಾರಿ, ಮಂಜಪ್ಪ ನಾಯ್ಕ, ನಾಗಪ್ಪ ನಾಯ್ಕ, ಭಾಸ್ಕರ ಆಚಾರಿ, ಚಂದ್ರು, ಉದಯ ನಾಯ್ಕ ಮುಂತಾದವರು  ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.