ಶಿರಸಿ: ‘ತನ್ನಷ್ಟಕ್ಕೇ ಹರಿದು ಸಮುದ್ರ ಸೇರುವ ನದಿಯ ದಿಕ್ಕನ್ನು ಬದಲಿಸು ವುದು ನಮ್ಮ ಸಂಸ್ಕೃತಿಯಲ್ಲ’ ಎಂದು ಭಾರತ ಪರಿಕ್ರಮ ಯಾತ್ರೆಯ ಸಾಧಕ ಸೀತಾರಾಮ ಕೆದಿಲಾಯ ಹೇಳಿದರು.
ಇಲ್ಲಿನ ಅಜಿತಮನೋಚೇತನಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ನದಿ ದಿಕ್ಕು ಬದಲಿಸುವ ಶಕ್ತಿ ನಮಗೆ ಇಲ್ಲ. ಸಣ್ಣ ತೊರೆ, ಹಳ್ಳಗಳನ್ನು ದೊಡ್ಡ ನದಿಗೆ ಜೋಡಿಸುವ ಕಾರ್ಯವನ್ನು ಪ್ರಕೃತಿಯೇ ಮಾಡುತ್ತದೆ. ನದಿ ತಿರುವು ಮಾಡುವ ಬದಲಾಗಿ ಪ್ರವಾಹದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳಬೇಕು’ ಎಂದು ಅವರು ಹೇಳಿದರು.
‘ಅಧ್ಯಾತ್ಮದ ನೆಲೆಯಲ್ಲಿ ಭಾರತೀಯ ಜೀವನ ನಿಂತಿದೆ. ದೇಶದ ಪ್ರತಿ ಹಳ್ಳಿಯಲ್ಲಿ ಈ ಸತ್ಯವನ್ನು ಕಾಣಬಹುದಾಗಿದೆ. ದೇಶದ ಉದ್ದಗಲದಲ್ಲಿ ಸಂಚರಿಸಿದಾಗ ಈ ಸತ್ಯ ಗೋಚರವಾಗಿದೆ. ಇಂತಹ ಸಂಸ್ಕೃತಿ ಇರುವ ತನಕ ಹಳ್ಳಿಗಳು ಸಹ ಉಳಿದುಕೊಳ್ಳುತ್ತವೆ.
ಅರ್ಥ ಮತ್ತು ಕಾಮ ಪಾಶ್ಚಾತ್ಯರ ಜೀವನ ಶೈಲಿಯಾಗಿದ್ದರೆ ಇವೆರಡರ ಜೊತೆಗೆ ಧರ್ಮ ಮತ್ತು ಮೋಕ್ಷವನ್ನು ಭಾರತೀಯ ಜೀವನ ಪದ್ಧತಿ ಹೊಂದಿದೆ’ ಎಂದು ಹೇಳಿದರು.
ಪ್ರಮುಖರಾದ ದಿವಾಕರ ಹೆಗಡೆ ಕೆರೆಹೊಂಡ, ಶ್ರೀಧರ ಸಾಗರ, ಸುಧೀರ ಭಟ್, ಅನಂತ ಅಶೀಸರ, ವಿ. ಆರ್. ಹೆಗಡೆ, ಪ್ರೊ. ರವಿ ನಾಯಕ, ಉದಯ ಸ್ವಾದಿ, ಡಾ. ಜಿ.ಎಂ. ಹೆಗಡೆ, ವಿ. ಎಂ. ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.