ADVERTISEMENT

‘ನೀರಿನ ಬವಣೆಯೇ ಪ್ರೇರಣೆ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 10:28 IST
Last Updated 20 ಏಪ್ರಿಲ್ 2017, 10:28 IST
ಶಿರಸಿ ತಾಲ್ಲೂಕಿನ ಬಿಸಲಕೊಪ್ಪ ಸಮೀಪದ ಉಲ್ಲಾಳಕೊಪ್ಪದಲ್ಲಿ ಕೃಷಿಕ ಎಸ್‌.ಜಿ.ಭಟ್ಟ ನಿರ್ಮಿಸಿರುವ ಕೆರೆ
ಶಿರಸಿ ತಾಲ್ಲೂಕಿನ ಬಿಸಲಕೊಪ್ಪ ಸಮೀಪದ ಉಲ್ಲಾಳಕೊಪ್ಪದಲ್ಲಿ ಕೃಷಿಕ ಎಸ್‌.ಜಿ.ಭಟ್ಟ ನಿರ್ಮಿಸಿರುವ ಕೆರೆ   

ಶಿರಸಿ: ಊರಿನ ನೀರಿನ ಬವಣೆ, ಒಣಗುತ್ತಿರುವ ತೋಟ, ವಿಫಲವಾಗುತ್ತಿ ರುವ ಕೊಳವೆ ಬಾವಿಗಳನ್ನು ಕಂಡ ರೈತರೊಬ್ಬರು ತಮ್ಮ ಮನೆಯ ಎದುರಿನ ಮಳೆಗಾಲ ನೀರಿನ ಗುಂಡಿಯನ್ನು ಕೆರೆಯಾಗಿ ಪರಿವರ್ತಿಸಿದ್ದಾರೆ. ತಾಲ್ಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಲ್ಲಾಳಕೊಪ್ಪದ ಕೃಷಿಕ ಎಸ್‌.ಜಿ. ಭಟ್ಟ ಅವರು ಎರಡು ವರ್ಷಗಳಿಂದ ನೀರಿನ ಬರ ಎದುರಿ ಸುತ್ತಿದ್ದರು. ಇಡೀ ಊರಿಗೆ ನೀರಿನ ಬರ ಎದುರಾಗಿರುವುದನ್ನು ಕಂಡ ಅವರು ಬರುವ ಮಳೆಗಾಲದಲ್ಲಿ ನೀರು ಸಂಗ್ರಹಿಸಬಹುದೆಂಬ ಉದ್ದೇಶದಿಂದ ಮನೆ ಎದುರಿನ ಹೊಟ್ಕೆರೆಯನ್ನು ವಿಸ್ತರಿಸಿ (ಬೆಟ್ಟದಿಂದ ಬರುವ ಮಳೆ ನೀರು ಸಂಗ್ರಹವಾಗುವ ಸ್ಥಳ) ಮುಕ್ಕಾಲು ಎಕರೆ ಪ್ರದೇಶದಲ್ಲಿ ಮಣ್ಣು ತೆಗೆದು ಕೆರೆ ಮಾಡಿದ್ದಾರೆ.

‘10–12 ದಿನ ಜೆಸಿಬಿಯ ಕೆಲಸ ಮಾಡಿಸಿ ಕೆರೆ ನಿರ್ಮಿಸಿದ್ದೇನೆ. ಇದಕ್ಕೆ ₹ 2.5 ಲಕ್ಷ ವೆಚ್ಚವಾಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಕೆರೆ ಅನುಕೂಲವಾಗಲಿದೆ. ಕೆರೆಯ ಪಿಚ್ಚಿಂಗ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಪಂಚಾಯ್ತಿಗೆ ವಿನಂತಿಸಿದ್ದೇನೆ. ಜಿಲ್ಲಾ ಉಸ್ತುವಾರಿ  ಸಚಿವರಿಗೆ ₹ 4 ಲಕ್ಷ ನೆರವು ನೀಡುವಂತೆ ಅರ್ಜಿ ಸಲ್ಲಿಸಿದ್ದೇನೆ’ ಎನ್ನುತ್ತಾರೆ ಅವರು.

‘ಕಳೆದ ವರ್ಷ ಗಣೇಶ ಚೌತಿಯಲ್ಲಿ ಗಣಪತಿ ಮೂರ್ತಿ ಮುಳುಗಿಸಲು ಊರಿನ ಕರೆಯಲ್ಲಿ ನೀರು ಇರಲಿಲ್ಲ. ಇದಕ್ಕಾಗಿ ಬಕೆಟ್‌ನಲ್ಲಿ ನೀರು ತುಂಬಿಟ್ಟು ಅದರಲ್ಲಿ ಗಣಪತಿ ವಿಸರ್ಜನೆ ಮಾಡಿದ್ದೆ. ಈ ಅನುಭವ ಜಲ ಸಂರಕ್ಷಣೆಯ ಪಾಠ ಕಲಿಸಿದೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.