ಕಾರವಾರ: ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ ಜತೆಗೆ ಪರಿಸರ ಪ್ರಜ್ಞೆ ಬೆಳೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ವಿ.ಪಿ.ದೀನದಯಾಳು ನಾಯ್ಡು ಅವರ ಶತಮಾನೋತ್ಸವದ ಅಂಗವಾಗಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಕಡಲತೀರ ಚಾರಣ ಹಾಗೂ ಪ್ರಕೃತಿ ಅಧ್ಯಯನ ಕುರಿತ ರಾಜ್ಯಮಟ್ಟದ ಶಿಬಿರವನ್ನು ಶುಕ್ರವಾರ ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಸರ್ಕಾರ ‘ಕರ್ನಾಟಕ ದರ್ಶನ’ ಏರ್ಪಡಿಸುತ್ತಿದ್ದು, ಅದರಂತೆಯೇ ರೇಂಜರ್ಸ್ ಅಂಡ್ ರೋವರ್ಸ್ಗಳಿಗೂ ‘ಭಾರತ ದರ್ಶನ’ ಏರ್ಪಡಿಸುವಂತೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆಗೆ ಕೋರಿದ್ದೇನೆ ಎಂದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯು ಅನೇಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಚಾರಣಕ್ಕೆ ಹೇಳಿ ಮಾಡಿಸಿದ ತಾಣಗಳು ಇಲ್ಲಿವೆ. ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮುಖ್ಯವಾಗಿದ್ದು, ಅದನ್ನು ಸರಿಯಾಗಿ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
‘ಸ್ಕೌಟ್ ಮತ್ತು ಗೈಡ್ಸ್ನ ತರಬೇತಿಗಾಗಿ ಜಿಲ್ಲಾ ಸಂಸ್ಥೆ ನಿರ್ಮಾಣಕ್ಕೆ ಕಾರವಾರದಲ್ಲಿ ಭೂಮಿ ಹಾಗೂ ಕಟ್ಟಡವನ್ನು ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗುತ್ತಿದ್ದು, ಸಂಸ್ಥೆಯ ಚಟುವಟಿಕೆಗಳ ವರದಿಯನ್ನು ನೀಡಿ’ ಎಂದು ಸಂಸ್ಥೆಯ ಜಿಲ್ಲಾ ಪ್ರಮುಖರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಕಾರವಾರ ಡಿಡಿಪಿಐ ಪಿ.ಕೆ.ಪ್ರಕಾಶ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಎ.ಚೆಲ್ಲಯ್ಯಾ, ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯ ಸಾಳುಂಕೆ, ಜಿಲ್ಲಾ ಮುಖ್ಯ ಆಯುಕ್ತ ಡಾ.ಜಿ.ಜಿ.ಸಭಾಹಿತ್, ಬಿ.ಡಿ.ಫರ್ನಾಂಡಿಸ್, ಗಣೇಶ್ ಬಿಷ್ಠಣ್ಣನವರ್, ರಾಮ್ ಲತಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.