ADVERTISEMENT

ಬಾಲ್ಯ ವಿವಾಹ ತಡೆ: ‘ಶಾಲೆ ಕಡೆ ನನ್ನ ನಡೆ’ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:06 IST
Last Updated 24 ಏಪ್ರಿಲ್ 2017, 6:06 IST

ಕುಮಟಾ: ‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ  ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ‘ಬಾಲ್ಯ ವಿವಾಹ ಜಾಗೃತಿ’  ಮತ್ತು ‘ ಶಾಲೆ ಕಡೆ ನನ್ನ ನಡೆ’ ಕುರಿತು ಜಾಗೃತಿ ಆಂದೋಲನ ಹಾಗೂ ಕಾನೂನು ಸಾಕ್ಷರತಾ ಶಿಬಿರ ಇದೇ 26 ರಂದು ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲ ನಡೆಯಲಿದ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ  ಪೂರ್ಣಿಮಾ ಎನ್‌.ಪೈ ಹೇಳಿದರು.

ಪಟ್ಟಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ‘ಬೇರೆ ಬೇರೆ ಕಾರಣಗಳಿಂದ ಶಾಲೆಗೆ ರಜೆ ಇರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹಗಳು ನಡೆದು ಹೋಗುತ್ತವೆ. ಅದೇ ರೀತಿ  ಮಕ್ಕಳು ಶಾಲೆಯಿಂದಲೂ ಹೊರಗುಳಿಯುವ ಪ್ರಸಂಗಗಳು ಬರುತ್ತವೆ. ಸರಿಯಾದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಇಂಥ ವಿಚಾರಗಳನ್ನು ಮನವರಿಕೆ ಮಾಡಿದರೆ ಆಗ ಬಾಲ್ಯ ವಿವಾಹ, ಮಕ್ಕಳು ಶಾಲೆಯಿಂದ ಹೊರಗುಳಿಯುವುದು ತಪ್ಪಿಸಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕಾಗಿ ಕಾನೂನು ರಥ ಬರಲಿದ್ದು, ಏ. 26 ರಂದು ಬೆಳಿಗ್ಗೆ 9–30ಕ್ಕೆ ಕುಮಟಾ ನ್ಯಾಯಾಲಯ ಆವರಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. 10 ಗಂಟೆಗೆ ಹೆಗಡೆಯ ಅಂಬೇಡ್ಕರ್ ಭವನದಲ್ಲಿ, ನಂತರ ಮಧ್ಯಾಹ್ನ 3 ಗಂಟೆಗೆ ಹನೇಹಳ್ಳಿ ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ADVERTISEMENT

ವಕೀಲರ ಸಂಘ, ಅಭಿಯೋಜನಾ ಇಲಾಖೆ, ತಾಲ್ಲೂಕು ಪಂಚಾಯ್ತಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಕ್ಷರ ಫೌಂಡೇಶನ್ ಸಂಸ್ಥೆ ಹಾಗೂ ಸ್ಥಳೀಯ ಸ್ತ್ರೀ ಶಕ್ತಿ ಸಂಘಗಳು ಸಹಯೋಗ ನೀಡಲಿವೆ’ ಎಂದು ಅವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ. ಹಟ್ಟಿ,  ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೋಹನಕುಮಾರಿ ಎನ್‌.ಬಿ.,  ವಕೀಲರ ಸಂಘದ ಅಧ್ಯಕ್ಷ ಅಶೋಕ ನಾಯ್ಕ, ಹಿರಿಯ ವಕೀಲ ಆರ್.ಎ. ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.