ಹಳಿಯಾಳ: ‘ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ್ದು, ಈ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.
ಈ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಹೆಗಡೆ ಗುರುವಾರ ನಾಮಪತ್ರ ಸಲ್ಲಿಸಿದ ನಂತರ ಗ್ರಾಮದೇವಿ ಜಾತ್ರಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಆರ್.ವಿ.ದೇಶಪಾಂಡೆ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿದಿಲ್ಲ. ರೈತರಿಗೆ ನ್ಯಾಯ ದೊರೆತಿಲ್ಲ’ ಎಂದು ದೂರಿದರು.
ಸುನಿಲ್ ಹೆಗಡೆ ಮಾತನಾಡಿ, ‘ಕಾಳಿನದಿ ನೀರಾವರಿ ಯೋಜನೆ ಮೊದಲಾದ ಹಲವಾರು ಜನಪರ ಯೋಜನೆಗಳು ನಾನು ಶಾಸಕನಾಗಿದ್ದ ಅವಧಿಯಲ್ಲಿ ಜಾರಿಯಾದವು. ರಾಜ್ಯದಲ್ಲಿ ಬಿಜೆಪಿ– ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಪಿಸಿದ್ದ ಯೋಜನೆಗಳಿವು. ಹಳಿಯಾಳ– ದಾಂಡೇಲಿ– ಜೊಯಿಡಾ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಅವರು ದೂರದೃಷ್ಟಿಯುಳ್ಳ ಕಾಮಗಾರಿ ಜಾರಿ ಮಾಡಿಸಿಲ್ಲ’ ಎಂದು ಆರೋಪಿಸಿದರು.
ಮುಖಂಡರಾದ ಶಿವಾಜಿ ನರಸಾನಿ, ಬಸವರಾಜ ಕಲಶೆಟ್ಟಿ, ತುಕಾರಾಮ ಮಾಂಜ್ರೆಕರ, ಮಂಗೇಶ ದೇಶಪಾಂಡೆ, ಎಸ್.ಎ.ಶೆಟವಣ್ಣವರ, ಗಿರೀಶ ಟೋಸೂರ, ಗಣಪತಿ ಕರಂಜೇಕರ, ಸಂತೋಷ ಘಟಕಾಂಬ್ಳೆ, ಅಪ್ಪು ಚರಂತಿಮಠ, ವಿಜಯಲಕ್ಷ್ಮೀ ಚವ್ಹಾಣ, ರೂಪಾ ಮೇಲಗಿರಿ, ಸಂತಾನ್ ಸಾವಂತ, ವಿ.ಎಂ.ಪಾಟೀಲ ಅವರೂ ಇದ್ದರು.
ನಾಮಪತ್ರ ಸಲ್ಲಿಕೆಯಾದ ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳಿಯಾಳ– ದಾಂಡೇಲಿ– ಜೊಯಿಡಾ ತಾಲ್ಲೂಕುಗಳ ಮುಖಂಡರು, ಕಾರ್ಯಕರ್ತರು ಮೆರವಣಿಗೆ ಮಾಡಿದರು. ಕ್ಷೇತ್ರ ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ನಾಮಪತ್ರ ಸ್ವೀಕರಿಸಿದರು. ಸುನೀಲ್ ಅವರ ತಂದೆ, ವಿಧಾನಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ, ಪತ್ನಿ ಸುವರ್ಣಾ ಸುನೀಲ್ ಹೆಗಡೆ ಅವರೂ ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.