ಸಿದ್ದಾಪುರ: ರೇಷ್ಮೆ ಸೂಕ್ಷ್ಮ ಬೆಳೆಯಾದರೂ ರೈತರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ವಿವೇಕ ಸುಭ್ರಾಯ ಭಟ್ಟ ಹೇಳಿದರು.
ತಾಲ್ಲೂಕಿನ ಕ್ಯಾದಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೊಣವತ್ತಿಯಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಸಿದ್ದಾಪುರ ರೇಷ್ಮೆ ಇಲಾಖೆ ಸಹಕಾರದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ರೇಷ್ಮೆ ಕೃಷಿ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಸೂಕ್ತ ಮಾಹಿತಿ ಇಲ್ಲದೆ ರೈತರು ಬೆಳೆಯಲು ಹಿಂಜರಿಯುತ್ತಿದ್ದರು. ಈಗ ಕೃಷಿಕರು ಆಸಕ್ತರಾಗಿದ್ದು, ಕೆಲವರು ಇದನ್ನೇ ಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಅತಿಕ್ರಮಿಸಿಕೊಂಡ ಜಮೀನಿನಲ್ಲಿ ರೇಷ್ಮೆ ವ್ಯವಸಾಯ ಮಾಡುತ್ತಿರುವವರಿಗೂ ಸೌಲಭ್ಯಗಳನ್ನು ಒದಗಿಸಲು ರೇಷ್ಮೆ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕಿ ವರಲಕ್ಷ್ಮಿ ಮಾತನಾಡಿ, ‘ರೈತರು ಯಾಂತ್ರಿಕ ವಿಧಾನ ಹಾಗೂ ಆಧುನಿಕ ತಂತ್ರಜ್ಞಾನ ಆಳವಡಿಸಿಕೊಳ್ಳಬೇಕು. ಇದರಿಂದ ವರ್ಷಕ್ಕೆ ಐದು ಬೆಳೆ ಬೆಳೆಯಬಹುದು’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಯಾದಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಿ.ವಿ ಭಟ್ ಮಾತನಾಡಿ, ‘ಮಿಶ್ರಬೆಳೆಯಾಗಿ ರೇಷ್ಮೆ ಬೆಳೆಯುವುದರಿಂದ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗುತ್ತದೆ. ಬೆಳೆ ಬೆಳೆಯುವಾಗ ಆರಂಭದಲ್ಲಿ ಅಡೆತಡೆಗಳು ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಸಂಬಂದಪಟ್ಟ ಇಲಾಖೆ ಅಥವಾ ಇತರ ರೇಷ್ಮೆ ಬೆಳೆಗಾರರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆ ಕುಸುಮಾ ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಸುಧೀರ್ ಗೌಡರ್, ಚೌಡು ಗೌಡ, ಟಿ.ಎಸ್ ಹುದ್ದಾರ, ಶ್ರೀಧರ ಹೆಗಡೆ, ರಾಮಾ ಬೀರಾ ಗೌಡ, ಕೃಷ್ಣ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.