ಕಾರವಾರ:ಇಲ್ಲಿನ ಬೈತಖೋಲ್ ಬಂದರಿನಲ್ಲಿ ಕಲುಷಿತ ನೀರು ಸೇವಿಸಿ 15ಕ್ಕೂ ಹೆಚ್ಚು ಕಾರ್ಮಿಕರು ಗುರುವಾರ ಅಸ್ವಸ್ಥಗೊಂಡಿದ್ದು,ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮೀನುಗಾರಿಕಾ ದೋಣಿಗಳಲ್ಲಿದುಡಿಯುತ್ತಿರುವಅಸ್ಸಾಂ,ಒಡಿಶಾ, ಪಶ್ಚಿಮ ಬಂಗಾಲ ರಾಜ್ಯಗಳಕಾರ್ಮಿಕರು ಅಸ್ವಸ್ಥಗೊಂಡವರು. ‘ನಾಲ್ಕುದಿನಗಳ ಹಿಂದೆ ರೊಟ್ಟಿ ಮತ್ತು ನೀರು ಸೇವಿಸಿದ್ದೆವು. ಬಳಿಕ ಹೊಟ್ಟೆನೋವು, ವಾಂತಿ ಮತ್ತು ಭೇದಿಯಾಯಿತು. ಹಾಗಾಗಿ ಆಸ್ಪತ್ರೆಗೆ ಬಂದು ದಾಖಲಾದೆವು’ ಎಂದು ತಿಳಿಸಿದ್ದಾರೆ.
ಮೀನುಗಾರಿಕಾ ದೋಣಿಗಳಿಗೆ ಚಿತ್ತಾಕುಲಾ ಸೀಬರ್ಡ್ ನಿರಾಶ್ರಿತರ ಕಾಲೊನಿಯ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಅದನ್ನು ಪರಿಶೀಲನೆ ಮಾಡಿದಾಗ ಮಲಿನಗೊಂಡಿರುವುದು ಕಂಡುಬಂದಿದೆ. ಅದೇರೀತಿ, ಪರ್ಸೀನ್ ದೋಣಿಗಳಲ್ಲಿರುವ ಟ್ಯಾಂಕ್ಗಳಲ್ಲೂ ನೈರ್ಮಲ್ಯದ ಕೊರತೆ ಪತ್ತೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ್ ಭೂತೆ ತಿಳಿಸಿದ್ದಾರೆ.
‘ನಾಲ್ಕು ದಿನಗಳಲ್ಲಿ 15 ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ಎಲ್ಲರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಾವಿಗೆ ಕ್ಲೋರಿನ್ ಸಿಂಪಡಣೆ ಮಾಡಲಾಗಿದೆ. ಅಲ್ಲದೇ ನೀರನ್ನು ಕುದಿಸಿಯೇ ಕುಡಿಯುವಂತೆ, ಆಹಾರ ಸೇವಿಸುವ ಮೊದಲು ಕೈಗಳನ್ನು ತೊಳೆದುಕೊಳ್ಳುವಂತೆ ಕಾರ್ಮಿಕರಿಗೆ ಸೂಚಿಸಲಾಗಿದೆ. ಮೀನುಗಾರರ ಮುಖಂಡರನ್ನೂ ಭೇಟಿ ಮಾಡಿ ಅವರಿಗೆ ಮಾಹಿತಿ ನೀಡಲಾಗಿದೆ. ಕಾರ್ಮಿಕರ ರಕ್ತದ ಮಾದರಿ, ಬಾವಿಯ ನೀರಿನ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.