ವಿಜಾಪುರ: ‘ನಗರದಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಆಹ್ವಾನಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಮಂಗಳವಾರ ನಡೆದ ಸ್ವಾಗತ ಸಮಿತಿಯ ವಿವಿಧ ಸಮಿತಿಗಳ ಅಧ್ಯಕ್ಷರ ಸಭೆಯಲ್ಲಿ ಅವರು ಮಾತನಾಡಿದರು.
108 ವಸಂತ ಪೂರೈಸಿರುವ ಸಿದ್ದಗಂಗಾ ಸ್ವಾಮೀಜಿ 12ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಬೇಕು ಎಂಬುದು ವಿಜಾಪುರ ಜಿಲ್ಲೆಯ ಜನತೆ ಆಶಯವಾಗಿದೆ. ಈ ನಿಟ್ಟಿನಲ್ಲಿ ಗೋ.ರು.ಚನ್ನಬಸಪ್ಪ ವಿಶೇಷ ಆಸಕ್ತಿ ವಹಿಸಿ ಸ್ವಾಮೀಜಿ ಮನವೊಲಿಸಿ ವಿಜಾಪುರಕ್ಕೆ ಬರುವಂತೆ ಒಪ್ಪಿಸಬೇಕು. ಸಂಚಾರಕ್ಕೆ ತೊಂದರೆಯಾಗದಂತೆ ಹೆಲಿಕಾಫ್ಟರ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುವುದಾಗಿ ಸಚಿವರು ಹೇಳಿದರು.
‘ಅಖಿಲ ಭಾರತ ಸಮ್ಮೇಳನ ನಿಜವಾದ ಅರ್ಥದಲ್ಲಿ ನಡೆಯಬೇಕು. ವಿವಿಧ ರಾಜ್ಯಗಳ ವಿದ್ವಾಂಸರು ಇಲ್ಲಿ ಭಾಗವಹಿಸಿ ಗೋಷ್ಠಿ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ 2 ಗೋಷ್ಠಿಗಳನ್ನು ಹೊರ ರಾಜ್ಯದ ವಿದ್ವಾಂಸರಿಗೆ ಮೀಸಲಿಡಬೇಕು’ ಎಂದರು.
’ಶರಣ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಮಾತನಾಡಿ, ಸಮ್ಮೇಳನದ ಗೋಷ್ಠಿಗಳಿಗೆ ವಿಷಯ ಹಾಗೂ ಉಪನ್ಯಾಸಕರನ್ನು ಅಂತಿಮಗೊಳಿಸಲಾಗುತ್ತಿದೆ. ಸ್ಥಳೀಯರಿಗೆ ಮತ್ತು ಉತ್ತರ ಕರ್ನಾಟಕದವರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಡಿಸೆಂಬರ್ 12ರಂದು ಉದ್ಘಾಟನೆ ಕಾರ್ಯಕ್ರಮದ ದಿನ ಮೆರವಣಿಗೆ ಏರ್ಪಡಿಸುವುದರಿಂದ ಸಮಯದಲ್ಲಿ ವಿಳಂಬವಾಗುತ್ತದೆ. ಆ ಕಾರಣಕ್ಕಾಗಿ ಮೆರವಣಿಗೆಯನ್ನು ಒಂದು ದಿನ ಮುಂಚಿತವಾಗಿಯೇ ನಡೆಸುವುದು ಸೂಕ್ತ’ ಎಂದರು.
ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಅವರನ್ನು ಬಿಎಲ್ಡಿಇ ಸಂಸ್ಥೆ ಪರವಾಗಿ ಬೆಳಗಾವಿ ನಾಗನೂರ ಮಠದ ಸಿದ್ದರಾಮ ಸ್ವಾಮೀಜಿ ಸನ್ಮಾನಿಸಿದರು.
ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮೀಜಿ, ಬಿಎಲ್ಡಿಇ ವಿ.ವಿ. ಉಪ ಕುಲಪತಿ ಡಾ.ಬಿ.ಜಿ.ಮೂಲಿಮನಿ, ಜಿಲ್ಲಾಧಿಕಾರಿ ಡಿ.ರಂದೀಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಉಮೇಶ ಕೋಳಕೂರ, ಶಿವಯೋಗಿ ತಂಬಾಕೆ, ಶ್ರೀಕಾಂತ ಶಿರಡೋಣ, ರಾಜಶೇಖರ ಮಗಿಮಠ, ವಿ.ಸಿ.ನಾಗಠಾಣ, ಡಾ.ಮಹಾಂತೇಶ ಬಿರಾದಾರ, ವಿಜಯಕುಮಾರ ಮಂಗಳವೇಡೆ, ಸಿದ್ದಣ್ಣ ಸಕ್ರಿ, ಚಂದ್ರಕಾಂತ ಶೆಟ್ಟಿ,
ಅಪ್ಪಾಸಾಹೇಬ ಹಕ್ಕೋಣೆ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.