ADVERTISEMENT

ಕಲೆ, ಸಾಹಿತ್ಯ ವಿಜಯಪುರ ಕೊಡುಗೆ ಅನನ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 6:20 IST
Last Updated 2 ಡಿಸೆಂಬರ್ 2017, 6:20 IST

ಕಲಕೇರಿ: ವಿಜಯಪುರ ಜಿಲ್ಲೆಯು ಕಲೆ, ಸಾಹಿತ್ಯ, ಸಂಸ್ಕೃತಿಕ ಲೋಕಕ್ಕೆ ಅಗಾದವಾದ ಕೊಡುಗೆ ನೀಡಿದ್ದು, ಈ ಹಿನ್ನಲೆಯಲ್ಲಿ ದುಡಿದ ಮಹನಿಯರನ್ನು ಸ್ಮರಿಸಿಕೊಳ್ಳುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಾಜಿ ಸಚಿವ ಎಂ.ಸಿ.ಮನಗುಳಿ ಹೇಳಿದರು.

ಸಿಂದಗಿ ತಾಲ್ಲೂಕು ಹಂದಿಗನೂರ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ, ಕನ್ನಡ ಸಾಹಿತ್ಯ ಪರಿಷತ್‌, ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿರುವ ನಟಕೇಸರಿ ಸಿದ್ರಾಮಪ್ಪ ಹಂದಿಗನೂರ ಮತ್ತು ಘಜಲ್ ಮಾಂತ್ರಿಕ ಪಂಡಿತ ರವೀಂದ್ರ ಹಂದಿಗನೂರರ ಪುಣ್ಯ ಸ್ಮರಣೊತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಂಗ ಮಂದಿರ ನಿರ್ಮಾಣಕ್ಕಾಗಿ ಒಂದು ಲಕ್ಷ ಅನುದಾನ ನೀಡಲಾಗುವುದು ಎಂದು ವಾಗ್ದಾನ ಮಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಿದರೇ ₨25 ಲಕ್ಷ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ಬರವಸೆ ನೀಡಿದರು.

ADVERTISEMENT

ತಾಲ್ಲೂಕು ಸಾಹಿತ್ಯ ಪರಿಷತ್ ಅದ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ರಂಗಮಂದಿರದ ಸಾರ್ವಭೌಮ ಸಿದ್ರಾಮಪ್ಪ ಹಂದಿಗನೂರರು ಡಾ.ರಾಜಕುಮಾರರ ಸರಿಸಾಟಿ ನಟರಾಗಿದ್ದರು ಎಂದರು.

ಮನು ಪತ್ತಾರ, ಖ್ಯಾತ ಹಿಂದೂಸ್ತಾನಿ ಸಾಹಿತಿ ಗಾಯಕ ಮತ್ತು ಘಜಲ್ ಮಾಂತ್ರೀಕ ಹಂದಿಗನೂರರ ಜೀವನ ಮತ್ತು ಸಂಗೀತದ ಮಿಡಿತಗಳನ್ನು ಕುರಿತು ಉಪನ್ಯಾಸ ನೀಡಿದರು.

ಎ.ಎಲ್.ನಾಗೂರ ಮಾತನಾಡಿದರು. ಕಡಕೋಳ ರುದ್ರಮುನಿ ಶಿವಾಚಾರ್ಯ, ಬೋರಗಿ ಸಿದ್ಧಬಸವ ಸ್ವಾಮೀಜಿ, ಪಿ.ಡಿ.ಓ ಝೇಂಡೆ ರಾಹುತ್ ತಳಕೇರಿ ಚನ್ನಪ್ಪಗೌಡ ಬಿರಾದಾರ, ಅಪ್ಪು ಶಿರೋಳಮಠ ಉಪಸ್ಥಿತರಿದ್ದರು. ಅಶೋಕ ಅಂಚೆಗಾವಿ ಸ್ವಾಗತಿಸಿದರು. ಕಿರುತೆರೆ ಕಲಾವಿದ ಈರಣ್ಣಗೌಡ ಹಂದಿಗನೂರ ಹೆಚ್ಚಿನ ಉಸ್ತುವಾರಿ ಜವಾಬ್ದಾರಿ ಮಾಡಿದರು, ಅಶೋಕ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.