ADVERTISEMENT

ಕಾಂಗ್ರೆಸ್‌ ನಾಯಕರಿಗೆ ತಕ್ಕ ಪಾಠ ಕಲಿಸಿ

ಕೋಲಿ ಕಬ್ಬಲಿಗ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶಿವಾಜಿ ಮನವಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 13:24 IST
Last Updated 23 ಏಪ್ರಿಲ್ 2018, 13:24 IST

ದೇವರ ಹಿಪ್ಪರಗಿ: ವಿಜಯಪುರ ಜಿಲ್ಲೆಯಲ್ಲಿ ಕೋಲಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡದೆ ಸಮುದಾಯವನ್ನು ನಿರ್ಲಕ್ಷಿಸಿ, ಕುತಂತ್ರ ರಾಜಕಾರಣಕ್ಕೆ ಮುಂದಾದ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದರ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ಕೋಲಿ ಕಬ್ಬಲಿಗ ಯುವ ವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಕರೆ ನೀಡಿದರು.

ಪಟ್ಟಣದ ಹುಂಡೇಕಾರ ಕಲ್ಯಾಣ ಮಂಟಪದಲ್ಲಿ ಜರುಗಿದ ಕೋಲಿ ಕಬ್ಬಲಿಗ ಸ್ವಾಭಿಮಾನಿ ಸಭೆಯಲ್ಲಿ ಅವರು ಮಾತನಾಡಿದರು.‘ಜಿಲ್ಲೆಯಲ್ಲಿ ಪ್ರತಿಯೊಂದು ಮತಕ್ಷೇತ್ರದಲ್ಲಿ ಸುಮಾರು 20 ಸಾವಿರಕ್ಕಿಂತಲೂ ಅಧಿಕ ಮತದಾರರಿದ್ದಾರೆ. ಪ್ರತಿ ಬಾರಿ ಕಾಂಗ್ರೆಸ್‌ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡುತ್ತಿತ್ತು. ಆದರೆ ಈ ಸಲ ಯಾರಿಗೂ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಪ್ರತಿ ಹಂತದಲ್ಲಿಯೂ ನಮ್ಮ ಸಮುದಾಯವನ್ನು ತುಳಿಯಲು ಜಿಲ್ಲೆಯ ನಾಯಕರು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿದರು.

ಬೆಳಗಾವಿ ವಿಭಾಗದ 56 ಮತಕ್ಷೇತ್ರಗಳಲ್ಲಿ ಒಂದೇ ಒಂದು ಟಿಕೆಟನ್ನು ಕೋಲಿ ಸಮಾಜಕ್ಕೆ ನೀಡಿಲ್ಲ. ಹಾನಗಲ್ಲ ಮತಕ್ಷೇತ್ರದ ಕೋಲಿ ಸಮಾಜದ ಆಕಾಂಕ್ಷಿ ಚಂದ್ರಪ್ಪ ಜಾಲಗಾರ, ದೇವರ ಹಿಪ್ಪರಗಿ ಮತಕ್ಷೇತ್ರದ ಶರಣಪ್ಪ ಸುಣಗಾರ ಇವರು ಪಕ್ಷದ ಸರ್ವೆ ಪ್ರಕಾರ ಟಿಕೆಟ್ ನೀಡಿದರೆ ಗೆಲ್ಲುತ್ತಾರೆಂಬ ವರದಿ ಇದ್ದರೂ ಟಿಕೆಟ್ ನೀಡಿಲ್ಲ. ಇದರ ಹಿಂದೆ ಸಚಿವ ಎಂ.ಬಿ.ಪಾಟೀಲ ಶಾಸಕ ಅಪ್ಪಾಜಿ ನಾಡಗೌಡರ ಕೈವಾಡವಿದೆ ಎಂದು ಆರೋಪಿಸಿದರು.

ADVERTISEMENT

ಕೋಲಿ ಸಮಾಜದ ಯುವ ಮುಖಂಡರಾದ ಸಾಯಬಣ್ಣ ಬಾಗೇವಾಡಿ, ಅರವಿಂದ ನಾಯ್ಕೋಡಿ, ಚಂದ್ರಶೇಖರ ಅಂಬಿಗೇರ (ಅರಕೇರಿ),ಬಸವರಾಜ ನಾಗರಾಳ ಮಾತನಾಡಿದರು.

ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್‌ ತಿರಸ್ಕರಿಸಬೇಕು. ಬಬಲೇಶ್ವರ ಮತಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸೋಲಿಸಲು ಬಿಜೆಪಿಯನ್ನು ಬೆಂಬಲಿಸಬೇಕು. ಅದರಂತೆ ಉಳಿದ ಕ್ಷೇತ್ರಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ನಮಗೆ ಅನುಕೂಲವಾಗುವ ಹಾಗೂ ನಮ್ಮ ಸಮಾಜದ ಬಗ್ಗೆ ಭರವಸೆಯುಳ್ಳ ಪಕ್ಷಕ್ಕೆ ಮತ ನೀಡಬೇಕು ಎಂದು ನಿರ್ಣಯಿ ಸಲಾಯಿತು. ಬಹುತೇಕ ಬಿಜೆಪಿಯನ್ನು ಬೆಂಬಲಿಸುವ ಕಡೆ ಒಲವು ವ್ಯಕ್ತವಾಯಿತು. ರಾಮಚಂದ್ರ ಕರವಿನಾಳ, ರೇವಣಸಿದ್ದ ಕೊಲಕಾರ,ಸಿದ್ದಣ್ಣ ಐರೋಡಗಿ, ದೇವಾನಂದ ಹೋರ್ತಿ, ದಶರಥ ನಾಟೀಕಾರ, ಶಿವಶರಣ ಮದ್ದರಕಿ, ಶಿವಪ್ಪ ಡಾಂಗಿ, ದಯಾನಂದ ನಾಯ್ಕೋಡಿ,ಬಸವರಾಜ ನಾಗೂರ, ಚಂದು ಅಂಬಿಗೇರ, ಅಭಿಗೌಡ ಬಿರಾದಾರ, ಬಸವರಾಜ ನಾಟೀಕಾರ, ಭಾಗಣ್ಣ ಕೆಂಬಾವಿ, ವಿವಿಧ ಗ್ರಾಮಗ ಕೋಲಿ ಸಮಾಜದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.