ನಿಡಗುಂದಿ: ನಿಡಗುಂದಿ ಪಟ್ಟಣವನ್ನು ಈಗಾಗಲೇ ಘೋಷಿಸಿರುವಂತೆ ತಾಲ್ಲೂಕು ಕೇಂದ್ರವನ್ನಾಗಿ ರೂಪಿಸಿ ಜ.1 ರಿಂದ ಕಚೇರಿ ಕಾರ್ಯಾರಂಭ ಮಾಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಲಾಯಿತು.
ಭಾನುವಾರ ರುದ್ರೇಶ್ವರ ಮಠದಲ್ಲಿ ತಾಲ್ಲೂಕು ಹೋರಾಟ ಸಮಿತಿ, ನಾಗರಿಕ ವೇದಿಕೆ ವತಿಯಿಂದ ನಡೆದ ಪಕ್ಷಾತೀತ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಮುಖಂಡ ಬಸವರಾಜ ಕುಂಬಾರ ಮಾತನಾಡಿ, ಇಲ್ಲಿಯವರೆಗೆ ಐದು ತಾಲ್ಲೂಕು ಪುನರ್ವಿಂಗಡಣಾ ಸಮಿತಿ ರಚನೆಯಾಗಿದ್ದು, ಯಾವುದೇ ಸಮಿತಿಯ ಹೆಸರಿಲ್ಲದ ತಿಕೋಟಾ ಗ್ರಾಮವನ್ನು ತಾಲ್ಲೂಕನ್ನಾಗಿ ಘೋಷಿಸಲಾಗಿದೆ. ಈಗಾಗಲೇ ತಿಕೋಟಾದಲ್ಲಿ ತಾಲ್ಲೂಕು ಕಚೇರಿ ಆರಂಭಿಸಲು ಅಧಿಸೂಚನೆ ಮಾಡಿ ಆದೇಶ ನೀಡಲಾಗಿದೆ. ನಿಡಗುಂದಿಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯರಾದ ಆರ್.ಸಿ.ರೇವಡಿ, ಜ.1 ರಿಂದ ಕಚೇರಿ ಆರಂಭಗೊಳ್ಳದಿದ್ದರೆ ನಿಯೋಜಿತ ನಿಡಗುಂದಿ ತಾಲ್ಲೂಕಿಗೆ ಸೇರ್ಪಡೆಗೊಳ್ಳುವ ಗ್ರಾಮಗಳ ಗ್ರಾಮಸ್ಥರ ಜೊತೆಗೂಡಿ ನಿಡಗುಂದಿ ಬಂದ್ ಆಚರಿಸಿ, ರಾಷ್ಟ್ರೀಯ ಹೆದ್ದಾರಿ 50 ಅನ್ನು ಬಂದ್ ಮಾಡಿ, ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಾನಂದ ಅವಟಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ ಮೊದಲಾದವರು ಮಾತನಾ ಡಿದರು. ಶಿವಾನಂದ ಮುಚ್ಚಂಡಿ, ಮುರಿಗೆಪ್ಪ ಸಜ್ಜನ, ಮುದ್ದಪ್ಪ ಯಳ್ಳಿಗುತ್ತಿ, ನಾಗರಿಕ ವೇದಿಕೆಯ ಅಧ್ಯಕ್ಷ ಈರಣ್ಣ ಮುರನಾಳ, ಶೇಖರ ದೊಡಮನಿ, ಮೋಪಗಾರ, ಬಾಲಚಂದ್ರ ನಾಗರಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.