ಬಸವನಬಾಗೇವಾಡಿ: ತಾಲ್ಲೂಕಿನ ಹುಣಶ್ಯಾಳ ಪಿ.ಬಿ, ಹೂವಿನಹಿಪ್ಪರಗಿ, ಬ್ಯಾಕೋಡ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವು ತನಿಖೆಯಿಂದ ಖಚಿತಗೊಂಡಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಹುಣಶ್ಯಾಳ ಪಿ.ಬಿ ಗ್ರಾಮ ಪಂಚಾಯಿತಿ ತನಿಖೆಯು ಸಮರ್ಪಕವಾಗಿ ಆಗಿಲ್ಲ ಎಂದು ಆರೋಪಿಸಿ ತನಿಖಾ ವರದಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ಈ ಹಿಂದೆ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.
ಅದರಂತೆ ತನಿಖೆ ನಡೆಸಿ ವರದಿ ಸಲ್ಲಿಸಲಾಗಿದೆ. ಆದರೆ ಹೂವಿನಹಿಪ್ಪರಗಿ ಗ್ರಾಮ ಪಂಚಾಯ್ತಿನಲ್ಲಿ ರಜಿಸ್ಟರ್ ನಂ–9 ನ್ನು ಮಾಯ ಮಾಡಿ ತನಿಖೆಯ ದಿಕ್ಕು ತಪ್ಪಿಸಲಾಗಿತ್ತು. ಅಲ್ಲದೇ ಹುಣಶ್ಯಾಳ ಪಿ.ಬಿ ಗ್ರಾಮ ಪಂಚಾಯಿತಿಯ ತನಿಖೆ ಸಮರ್ಪಕವಾಗಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಉಮೇಶ ಅವಟಿ, ಭೀಮು ನಿಕ್ಕಂ, ಶಿವಾನಂದ ದೊಡಮನಿ, ಸುನೀಲ ರಾಠೋಡ, ಮಾಳಿಂಗರಾಯ ಗುಂಡಳ್ಳಿ, ಇಸ್ಮಾಯಿಲ್ ಚಪ್ಪರಬಂದ, ಮಾಂತಗೌಡ ಕಳ್ಳಿ, ಗಿಡ್ಡಪ್ಪಗೌಡ ಬಿರಾದಾರ, ರಾಜಕುಮಾರ ಕುದರಿ, ನಿಂಗಪ್ಪ ಬಿರಾದಾರ, ಶರಣಪ್ಪ ಗೊಳ ಸಂಗಿ, ಸಂತೋಷ ಬರಗಿ, ಮಂಜುನಾಥ ಅರಕೇರಿ, ವಿದ್ಯಾದರ ದೊಡಮನಿ, ಸಂಜು ಉಕ್ಕಲಿ, ಮಹೇಂದ್ರ ಚಕ್ರವರ್ತಿ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.