ವಿಜಯಪುರ: ‘ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಗತಿಸಿದರೂ ರೈತರು, ಕಾರ್ಮಿಕರು ಘನತೆಯಿಂದ ಬದುಕುವ ವಾತಾವರಣ ನಿರ್ಮಾಣಗೊಂಡಿಲ್ಲ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮೀ ವಿಷಾದ ವ್ಯಕ್ತಪಡಿಸಿದರು.
ನಗರದ ಶಿವಶರಣೆ ನಿಂಬೆಕ್ಕ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಿಐಟಿಯು ಕಾರ್ಮಿಕ ಸಂಘಟನೆಯ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿದ ಅವರು ‘ದೇಶದ ಬಹುಸಂಖ್ಯಾತ ಕಾರ್ಮಿಕರು, ರೈತರು ನಿತ್ಯವೂ ಹಸಿವು, ನೀರಡಿಕೆ, ಉದ್ಯೋಗ, ಶಿಕ್ಷಣ, ಬಡತನ, ಆರೋಗ್ಯದಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲದ ದರಿದ್ರ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ’ ಎಂದು ದೂರಿದರು.
‘ಸ್ವಾತಂತ್ರ್ಯ ನಂತರ ಅಧಿಕಾರ ದಲ್ಲಿರುವ ಕಾಂಗ್ರೆಸ್, ಬಿಜೆಪಿ, ಜನತಾ ಪರಿವಾರದಂತಹ ಬಂಡವಾಳಗಾರರ ಪಕ್ಷಗಳಿಂದ ನಡೆದ ರೈತ, ಕಾರ್ಮಿಕ ವಿರೋಧಿ ಆಡಳಿತ ನೀತಿಯಿಂದಾಗಿ ಅತ್ಯಂತ ದಾರುಣ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. 1991ರಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಉದಾರೀಕರಣ, ಜಾಗತೀಕರಣ ನೀತಿಯಿಂದಾಗಿ ದೇಶದ ಆರ್ಥಿಕ ಸ್ವಾತಂತ್ರ್ಯಕ್ಕೆ ತೀವ್ರ ಧಕ್ಕೆಯುಂಟಾಯಿತು.
ವಾಜಪೇಯಿ, ಮೋದಿ ಸರ್ಕಾರಗಳ ಕಾರ್ಪೊರೇಟ್ ನೀತಿಗಳಿಂದ ದೇಶದ ಸಂಪತ್ತನ್ನೆಲ್ಲ ಲೂಟಿ ಮಾಡಿದ, ಕಾರ್ಪೊರೇಟ್ ಕಂಪೆನಿಗಳ ಒಡೆಯರು ಕೋಟ್ಯಧೀಶರಾಗುತ್ತಿದ್ದು, ರೈತರು, ಕಾರ್ಮಿಕರು ಜೀವನ ನಡೆಸಲು ಆಗ ದಂತ ದುಸ್ಥಿತಿ ಇಂದಿಗೂ ತಪ್ಪ ದಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಣ್ಣಾರಾಯ ಈಳಗೇರಾ ಮಾತನಾಡಿದರು. ಭಾರತಿ ವಾಲಿ, ಸರಸ್ವತಿ ಮಠ, ಸೋಮಪ್ಪ ಆಯಟ್ಟಿ, ಸುನಂದಾ ನಾಯಕ, ಸುವರ್ಣಾ ಹಲಗಣಿ, ಜಯಶ್ರೀ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.