ADVERTISEMENT

ಜೀವನಾಧಾರವಾದ ಹುಣಸೆ ಬೇರ್ಪಡಿಸುವ ಕಾಯಕ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:38 IST
Last Updated 22 ಮೇ 2018, 9:38 IST
ಹೊರ್ತಿ ಸಮೀಪದ ಇಂಚಗೇರಿ ಗ್ರಾಮದಲ್ಲಿ ಮಹಿಳೆಯರು,ಯುವಕರು, ವೃದ್ಧರು ,ಇತರರುಹುಣಸೆ ಕಾಯಿ ಹಣ್ಣು ಒಡೆಯುವ ಕಾರ್ಯದಲ್ಲಿ ನಿರತರಾಗಿರುವುದು.
ಹೊರ್ತಿ ಸಮೀಪದ ಇಂಚಗೇರಿ ಗ್ರಾಮದಲ್ಲಿ ಮಹಿಳೆಯರು,ಯುವಕರು, ವೃದ್ಧರು ,ಇತರರುಹುಣಸೆ ಕಾಯಿ ಹಣ್ಣು ಒಡೆಯುವ ಕಾರ್ಯದಲ್ಲಿ ನಿರತರಾಗಿರುವುದು.   

ಹೊರ್ತಿ: ಬಿಸಿಲಲ್ಲಿ ಕೆಲಸ ಮಾಡುವುದು ಎಂದರೆ ಎಲ್ಲರಿಗೂ ಕಷ್ಟವೇ. ಆದರೆ ಮನೆಯಲ್ಲೇ ಕುಳಿತು ಹಣ ಗಳಿಸುವ ಕೆಲಸ ಸಿಕ್ಕರೆ ಯಾರೂ ಬೇಡ ಎನ್ನರು. ನೆರಳಲ್ಲೇ ಕುಳಿತು ಲಾಭ ಗಳಿಸುವ ಕೆಲಸ ಈಗ ಗ್ರಾಮೀಣ ಪ್ರದೇಶದ ಜನರಿಗೆ ಸಿಗುತ್ತಿದೆ. ಹುಣಸೆಹಣ್ಣಿನಿಂದ ಬೀಜ ಬೇರ್ಪಡಿಸುವ ಕಾರ್ಯ ಸಂಸಾರ ಮುನ್ನೆಡೆಸಲು ಸಹಕಾರಿಯಾಗಿದೆ.

ಒಂದು ಸೋಲಗಿ ಹುಣಸೆ ಹಣ್ಣು ಬೇರ್ಪಡಿಸಿದರೆ ₹40 ಕೂಲಿ ಸಿಗುತ್ತದೆ. ಒಂದು ದಿನಕ್ಕೆ ಇಬ್ಬರು ಬೆಳಿಗ್ಗೆಯಿಂದ ಸಂಜೆವರೆಗೆ ಗರಿಷ್ಠ 10 ಸೊಲಗಿ ಹಣ್ಣು ಬೇರ್ಪಡಿಸಬಹುದು. ಇದಕ್ಕಾಗಿ ತಲಾ ಒಬ್ಬರಿಗೆ ₹400 ಸಿಗಲಿದೆ. ಇದು ಸ್ವಲ್ಪ ಕಷ್ಟ ಎನಿಸಿದರೂ ನೆರಳಲ್ಲಿ ಕುಳಿತು ಮಾಡಬಹುದಾದ ಕೆಲಸವಾದ್ದರಿಂದ ಬೀಸಿಲಿನ ತಾಪತ್ರಯವಿಲ್ಲ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ‌ಹುಣಸೆ ಕಾಯಿ ಜಜ್ಜುವ-ಬೇರ್ಪಡಿಸುವ ಕಾಯಕ ಬಹುತೇಕರಿಗೆ ಜೀವನಾಧಾರವಾಗಿದೆ. ಈ ಭಾರಿ ಉತ್ತಮ ಮಳೆಯಾದ್ದರಿಂದ ಹುಣಸೆಕಾಯಿ ಫಸಲು ಹೆಚ್ಚು ಬಂದಿದೆ. ಹಾಗಾಗಿ ಇಲ್ಲಿನ ಜನರಿಗೆ ಬೇಸಿಗೆಯಲ್ಲಿ ಕೈ ತುಂಬಾ ಕೆಲಸ ಸಿಗುತ್ತಿದೆ.

ADVERTISEMENT

ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಗ್ರಾಮದ ಹುಣಸೆಕಾಯಿ ವ್ಯಾಪಾರಸ್ಥ ಮೈಬುಸಾಬ ಲೋಣಿ, ‌ಸಂಗಡಿಗರಾದ ಫಿರಸಾಬ ಮುಲ್ಲಾ, ಮಾಧು ಪಾಟೀಲ, ಪೈಗಂಬರ ಮುಲ್ಲಾ, ಕಾಶೀಮಸಾಬ ಬಾಬಾನಗರ ಅವರು ಹುಣಸೆ ಮರಗ
ಳನ್ನು ಹುಡುಕಿಕೊಂಡು ಹೋಗಿ ಖರೀದಿಸುತ್ತಾರೆ. ಕಾಯಿಗಳನ್ನು ಬಡಿದು ಉದುರಿಸುವ ಕೆಲಸಗಾರರನ್ನು ಮತ್ತು ಆರಿಸಲೂ ಹೆಣ್ಣು ಕೂಲಿ ಕಾರ್ಮಿಕರನ್ನು ದೂರದ ರಾಮತೀರ್ಥ, ಕೊಟ್ಟಲಗಿ, ಸಿದ್ಧನಾಥ, ಉಮರಾಣಿ, ಕಕಮರಿ, ಕನಮಡಿ, ಹೊರ್ತಿ, ಡೋಮನಾಳ, ಸಾವಳಸಂಗ, ಇಂಚಗೇರಿ, ಕೋಳುರಗಿ, ಸೋನಕನಳ್ಳಿ, ಹತ್ತಳ್ಳಿ, ಲೋಣಿ, ಬರ
ಡೋಲ ಮತ್ತು ಮಹಾರಾಷ್ಟ್ರದ ಪಾಂಡಿಚೇರಿ, ಖೋಜಾನವಾಡಿ, ಜಾಲಿಹಾಳ, ಮಾಡಗ್ಯಾಳ, ಕರಜಗಿ, ಬೋರ್ಗಿ, ಆಕಳವಾಡಿ ಗ್ರಾಮಗಳಿಂದ ಕರೆ ತರಲಾಗುತ್ತದೆ. ಕಾಯಿಯ ಮೇಲಿನ ಸೊಟ್ಟಿಯನ್ನು ಬಡಿದು ಕಾಯಿಯನ್ನು ಕಟ್ಟಿಗೆಯ ಗಣಕೋಲದಿಂದ ಜಜ್ಜಿ ಒಳಗಿನ ಬೀಜಗಳನ್ನು ತೆಗೆಯುತ್ತಾರೆ. ಒಂದು ಸೋಲಗಿ ಹುಣಸೆಗೆ ಬೇರ್ಪಡಿಸಲು ₹40 ಕೂಲಿ ಪಡೆಯುತ್ತಾರೆ.

ಹುಣಸೆ ಹಣ್ಣನ್ನು ಸೊಲ್ಹಾಪುರ, ಪುಣೆ, ಮುಂಬೈ, ಕೊಲ್ಹಾಪುರ, ಸಾಂಗ್ಲಿ, ಮಿರಜ, ಸಾತಾರಾ ಸೇರಿದಂತೆ ಎಲ್ಲಿ ಉತ್ತಮ ಧಾರಣಿ ಸಿಗುತ್ತದೋ ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಹುಣಸೆಕಾಯಿ ಹಣ್ಣಿನ ವ್ಯಾಪಾರಸ್ಥ ಇಂಚಗೇರಿ ಮೈಬುಸಾಬ ಲೋಣಿ.
**
ಶಾಲೆಗೆ ರಜೆ ಇರುವ ಕಾರಣ ನಾವು ಪೋಷಕರ ಜತೆಗೂಡಿ ಹುಣಸೆಕಾಯಿ ಹೊಡೆಯುವ ಕೆಲಸದಲ್ಲಿ ತೊಡಗುತ್ತೇವೆ
ಚಾಂದಬಿ ಲೋಣಿ, ವಿದ್ಯಾರ್ಥಿನಿ

ಕೆ.ಎಸ್.ಈಸರಗೊಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.