ದೇವರ ಹಿಪ್ಪರಗಿ: ಧರ್ಮದ ತಳಹದಿಯ ಮೇಲೆ ಸಾಗುವವನ ಜೀವನ ಸುಖಮಯವಾಗಿರುತ್ತದೆ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.ಸಮೀಪದ ಇಬ್ರಾಹಿಂಪುರದಲ್ಲಿ ನಡೆದ ಜಟ್ಟಿಂಗರಾಯ ಹಾಗೂ ರಾವುತರಾಯ ಜಾತ್ರೆ ಮಹೋತ್ಸವ ಅಂಗವಾಗಿ ಧರ್ಮಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಮ್ಮದು ವಿಶಿಷ್ಠ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳಿಂದ ಕೂಡಿದ ಧಾರ್ಮಿಕ ಬೀಡಾಗಿದೆ. ಇಲ್ಲಿ ಭಕ್ತಿಯ ಪರಾಕಾಷ್ಠೆ ಕಾಣುತ್ತೇವೆ ಎಂದರು.ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸೇರಿಕೊಂಡು ಪಾಲಿಸುವ ಧಾರ್ಮಿಕ ಕಾರ್ಯ ಶ್ಲಾಘನೀಯ. ಇದರಲ್ಲಿ ಮುಂದಿನ ಪೀಳಿಗೆ ಮುಂದುವರೆಯಬೇಕು. ಹಾಗೆಯೇ ಹಾಲು ಮತದ ಬಂಧುಗಳು ಧಾರ್ಮಿಕತೆ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ನೀಡುವಂತಾಗಲಿ ಎಂದು ಹೇಳಿದರು.
ರಾಜ್ಯ ಯುವ ಕುರುಬರ ಸಂಘದ ಮಹಿಳಾ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ಗ್ರಾಮೀಣ ಜನರ ಸಾಮರಸ್ಯದ ಜೀವನ ಹಿತಕರವಾಗಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಹೇಳಿದರು. ಹಾಲುಮತ ಜನರ ಸಂಪ್ರದಾಯ ಪಾಲನೆ, ನಂಬಿಕೆ ವಿಶಿಷ್ಟತೆಯಿಂದ ಕೂಡಿವೆ. ಎಲ್ಲ ಸಮುದಾಯದವರೊಂದಿಗೆ ಸಾಮರಸ್ಯದಿಂದ ಇದ್ದು ಶಾಂತಿಪ್ರಿಯರು ಅನಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಉಪಾಧ್ಯಕ್ಷ ರಾಜುಗೌಡ ಪಾಟೀಲ( ಕುದರಿ ಸಾಲವಾಡಗಿ), ಮೋಹನ ಮೇಟಿ ಮಾತನಾಡಿದರು. ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಸಂಗಮೇಶ ಛಾಯಾಗೋಳ, ನಿಂಗಪ್ಪ ಶಿವೂರ, ಪ್ರೊ.ಬಿ.ಎನ್.ಪಾಟೀಲ, ರಮೇಶ ಮಶಿಬಿನಾಳ, ಶಿವಾಜಿ ಮೆಟಗಾರ, ಚಾಂದಕವಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾವುಡಿ ಸೇರಿದಂತೆ ಇತರರಿದ್ದರು. ಕಾರ್ಯಕ್ರಮದಲ್ಲಿ ಜಾತ್ರೆ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ನಡೆಯಿತು. ಸಮಾವೇಶದಲ್ಲಿ ಜಾಲವಾದ, ಮಣೂರ, ಕೊರವಾರ, ಕೊಕಟನೂರ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.