ADVERTISEMENT

ನಾಟಿ ಪದ್ಧತಿಯಲ್ಲಿ ತೊಗರಿ; ಕೃಷಿ ಸಚಿವ ಹರ್ಷ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:47 IST
Last Updated 8 ಜುಲೈ 2017, 6:47 IST

ಅಥರ್ಗಾ (ವಿಜಯಪುರ): ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ನಾಟಿ ಪದ್ಧತಿಯಲ್ಲಿ ತೊಗರಿ ಬೆಳೆಯುವ ವಿನೂತನ ಪ್ರಯೋಗಕ್ಕೆ ಸಾಕ್ಷಿಯಾಗಿರುವ ಇಲ್ಲಿನ ಪೀರಪ್ಪ ಗುಳಗಿ ಹೊಲಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಗುರುವಾರ ಮುಸ್ಸಂಜೆ ಭೇಟಿ ನೀಡಿದರು.

ಐದು ಎಕರೆ ಹೊಲದಲ್ಲಿ ಟಿಎಸ್ -3 ತಳಿಯ 6X3 ಅಡಿ ಅಂತರದಲ್ಲಿ ನಾಟಿ ಮಾಡಲಾಗಿರುವ ಕ್ಷೇತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಹೊಲದಲ್ಲಿ ಜಮಾಯಿಸಿದ್ದ ರೈತರಿಗೆ ನೂತನ ವಿಧಾನದ ಬಗ್ಗೆ ಖುದ್ದು ವಿವರಣೆ ನೀಡಿದ ಕೃಷಿ ಸಚಿವರು, ‘ಈ ಹಿಂದೆ ಸಾಂಪ್ರದಾಯಿಕ ಪದ್ಧತಿಯಲ್ಲಿ ತೊಗರಿ ಬೆಳೆಯಲಾಗುತ್ತಿತ್ತು. ಈಗ ನಾಟಿ ಪದ್ಧತಿ ಆಧರಿಸಿ ಬೆಳೆ ಬೆಳೆಯುವ ವಿನೂತನ ವಿಧಾನವನ್ನು ಪರಿಚಯಿಸುವ ಕೆಲಸ ಕೃಷಿ ಇಲಾಖೆಯಿಂದ ನಡೆದಿದೆ.

ಹನಿ ನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ. ಇದರಿಂದ ನೀರು ಪೋಲಾಗುವುದು ಸಹ ಕಡಿಮೆ. ಬಹು ಮುಖ್ಯವಾಗಿ ಕಡಿಮೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆ ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿತ್ತು, ಬೆಳೆ ಒಂದು ಹಂತಕ್ಕೆ ಬಂದ ಮೇಲೆ ಬೀಜ ಕಳಪೆ ಇರುವುದು ಗೊತ್ತಾಗು­ವಂತ ಪರಿಸ್ಥಿತಿ ಇತ್ತು.

ADVERTISEMENT

ಆದರೆ ನಾಟಿ ಪದ್ಧತಿಯಲ್ಲಿ ಪೂರ್ವದಲ್ಲಿಯೇ ವಿಶೇಷ ಟ್ರೇಗಳಲ್ಲಿ ಸಸಿಗಳನ್ನು ಬೆಳೆಸುವುದ­ರಿಂದಾಗಿ ಅಲ್ಲಿಯೇ ರಿಸಲ್ಟ್ ಗೊತ್ತಾಗು­ತ್ತದೆ. ಹೀಗಾಗಿ ರೈತರು ತೊಂದರೆ ಎದುರಿಸುವ ಪ್ರಶ್ನೆಯೇ ಇಲ್ಲ’ ಎಂದು ವಿನೂತನ ಪದ್ಧತಿಯ ಮಹತ್ವದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.

‘ನೂತನ ವಿಧಾನವನ್ನು ಕೃಷಿಕರು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಇಳುವರಿ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು. ಇಂಡಿ ಶಾಸಕ ಯಶವಂತ­ರಾಯಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್, ಉಪ ನಿರ್ದೇಶಕ ವಿಲಿಯಂ ರಾಜಶೇಖರ, ಸುತ್ತಮುತ್ತಲಿನ ರೈತರು, ರೈತ ಅನುವುಗಾರರು, ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.