ಇಂಡಿ: ‘ವಿಜಯಪುರ ಜಿಲ್ಲೆಯ ಸಮಗ್ರ ನೀರಾವರಿಗೆ ಮಾಜಿ ಪ್ರಧಾನಿ ದೇವೆಗೌಡರ ಕೊಡುಗೆ ಅಪಾರ. ಅವರ ಖುಣ ತೀರಿಸುವದು ನಮ್ಮ ಧರ್ಮ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಹೇಳಿದರು. ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಈಚೆಗೆ ಭತಗುಣಕಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶ ಮತ್ತು ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇವೆಗೌಡರು ಪ್ರಧಾನಿಯಾಗಿದ್ದ ವೇಳೆ ನೀರಾವರಿಗಾಗಿ ಸಾವಿರಾರು ಕೋಟಿ ಹಣ ಖರ್ಚು ಮಾಡಿದ್ದಾರೆ. ಆಲಮಟ್ಟಿ ಅಣೆಕಟ್ಟೆ ಎತ್ತರಿಸಿ ಸಿಂದಗಿ -ಮತ್ತು ಇಂಡಿ ತಾಲ್ಲೂಕುಗಳನ್ನು ನೀರಾವರಿಗೆ ಒಳಪಡಿಸಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಜಿಲ್ಲೆಗೆ ಸಾಕಷ್ಟು ನೆರವು ನೀಡಿದ್ದಾರೆ’ ಎಂದು ತಿಳಿಸಿದರು.
‘ಇಂಡಿ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ. ನಮ್ಮ ಪಕ್ಷದಿಂದ ಏಕೈಕ ವ್ಯಕ್ತಿ ಬಿ.ಡಿ.ಪಾಟೀಲ ಇದ್ದಾರೆ. ಅವರಿಗೆ ಪಕ್ಷದ ಟಿಕೆಟ್ ಕೊಡುವುದು ಸತ್ಯ. ಇದಕ್ಕೆ ಅನೇಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಮಾತು ನಂಬಬೇಡಿ ಎಂದ ಅವರು, ಜೆಡಿಎಸ್ ಪಕ್ಷ ಜಾತ್ಯಾತೀತ ಪಕ್ಷವಾಗಿದ್ದು, ಇನ್ನುಳಿದ ಎಲ್ಲ ಪಕ್ಷಗಳು ಜಾತಿಯ ವಿಷಬೀಜ ಬಿತ್ತಿ ದೇಶ ಹಾಳು ಮಾಡುತ್ತಿವೆ’ ಎಂದು ದೂರಿದರು.
ಎಂ.ಅರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ರೇಶ್ಮಾ ಪಡೆಕನೂರ, ಎಲ್.ಎಲ್.ಉಸ್ತಾದ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮು ರಾಠೋಡ, ಸಿದ್ದು ಡಂಗಾ, ತಾಲ್ಲೂಕು ಪಂಚಾಯ್ತಿ ಸದಸ್ಯ ನಾನಾಗೌಡ ಪಾಟೀಲ, ಇಕ್ಬಾಲ ಪಠಾಣ, ಮಾಳಪ್ಪ ಉಮರಾಣಿ, ಮಲಗಣ್ಣ ಹುನ್ನೂರ, ಮುಬಾರಕ ಪಠಾಣ, ಅರವಿಂದ ಹಂಗರಗಿ, ಶ್ರೀಶೈಲಗೌಡ ಪಾಟೀಲ, ಮಹಿಬೂಬ ಬೈನೂರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.