ದೇವರ ಹಿಪ್ಪರಗಿ : ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ ಹೆಚ್ಚುವರಿ ನೀರಿನ ಟ್ಯಾಂಕರ್ಗಳನ್ನು ಶೀಘ್ರವಾಗಿ ಬಳಸಿ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಪಿಡಿಓ ಲಕ್ಷ್ಮಣ ನಾವಿ ಅವರನ್ನು ಆಗ್ರಹಿಸಿದರು.ಸಮೀಪದ ಜಾಲವಾದ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಪಿಡಿಓ ಕುಡಿಯುವ ನೀರು ಹಾಗೂ ಬಸವ ಆಶ್ರಯ ಯೋಜನೆಯಡಿಯ ಫಲಾನುಭವಿಗಳ ಆಯ್ಕೆ ಕುರಿತಂತೆ ವಿಷಯ ಪ್ರಸ್ತಾಪಿಸಿದಾಗ ವಿಷಯ ಪ್ರಸ್ತಾಪಿಸಿದರು. ಗ್ರಾಮಸ್ಥರಿಗೆ ಮೊದಲು ಕುಡಿಯುವ ನೀರು ಕೊಡಿ.
ಜಿಲ್ಲಾಧಿಕಾರಿಗಳು ಹೆಚ್ಚುವರಿ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆಗೆ ಅನುಮತಿ ನೀಡಿದ್ದರೂ ಈವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ. ಇಡೀ ಗ್ರಾಮಕ್ಕೆ ದಿನಪೂರ್ತಿ ಎಷ್ಟು ಟ್ಯಾಂಕರ್ ನೀರು ಪೂರೈಸುತ್ತಿರಿ? ಯಾವ ಯಾವ ಓಣಿಗೆ ಎಷ್ಟು ಟ್ಯಾಂಕರ್ಗಳಿವೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ನೋಡಲ್ ಅಧಿಕಾರಿ ಎಚ್.ವೈ. ಸಿಂಗೇಗೋಳ ‘ನಾಳೆಯಿಂದಲೇ ಜಿಲ್ಲಾಧಿಕಾರಿಗಳು ಆದೇಶ ಮಾಡಿರುವ ಹೆಚ್ಚುವರಿ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ಬಸವ ಆಶ್ರಯ ಯೋಜನೆಯಡಿ 30 ಮನೆಗಳು ಮಂಜೂರಾಗಿದ್ದು ಮನೆ ಇಲ್ಲದವರಿಗೆ ಗ್ರಾಮಸಭೆಯ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಗ್ರಾಮಸ್ಥರ ಪರವಾಗಿ ಬಾಳು ದೇವೂರ ಮಾತನಾಡಿ, ‘ಹೆಸರಿಗಷ್ಟೇ ಗ್ರಾಮಸಭೆ ಮಾಡಿದರೆ ಯಾವುದೇ ಪ್ರಯೋಜನ ಇರುವುದಿಲ್ಲ. ಆಶ್ರಯ ಮನೆಗಳ ಮಂಜೂರಾತಿ ಕಾರ್ಯವನ್ನು ಶೀಘ್ರ ಮಾಡಬೇಕು. ಕುಡಿಯುವ ನೀರಿನ ಕೊರತೆ ಉಂಟಾಗಿ ನೀರಿಗಾಗಿ ಮನೆಮಂದಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಶೀಘ್ರ ಕುಡಿಯುವ ನೀರು ಪೂರೈಕೆ ಮಾಡಬೇಕು. ಪಿಡಿಓ ಅವರಿಗೆ ನಮ್ಮ ಸಮಸ್ಯೆಗಳು ಅರ್ಥವಾಗುವುದಿಲ್ಲ. ಏಕೆಂದರೆ ಅವರು ಬರುವುದೇ ಅಪರೂಪ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ವಿಫಲರಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.