ADVERTISEMENT

‘ಬಡತನ ಅಳಿಸಲು ಜನಸಂಖ್ಯೆ ನಿಯಂತ್ರಿಸಿ’

ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಕುರಿತ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 4:54 IST
Last Updated 12 ಜುಲೈ 2017, 4:54 IST

ವಿಜಯಪುರ: ‘ರಾಷ್ಟ್ರೀಯ ಆರ್ಥಿಕ ಸಂರಕ್ಷಣಾ ಅಭಿವೃದ್ಧಿ ಉತ್ತೇಜನ ಗೊಳಿಸಿ, ಸಂಪನ್ಮೂಲದ ಸಮ ಹಂಚಿಕೆ ಮತ್ತು ಬಡತನ ನಿರ್ಮೂಲನೆ ಮಾಡಲು ಜನಸಂಖ್ಯೆ ನಿಯಂತ್ರಣ ಅತ್ಯವಶ್ಯ’ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಬೋಲಾ ಪಂಡಿತ ಹೇಳಿದರು.

ನಗರದ ರುಡ್‌ಸೆಟ್‌ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆಹೇರಿ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿ ಯಿಂದ ಮಂಗಳವಾರ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಹಮ್ಮಿ ಕೊಂಡಿದ್ದ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟದಿಂದ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಮಾರಕ ಉಂಟಾಗಲಿದೆ. ಕೇಂದ್ರ–ರಾಜ್ಯ ಸರ್ಕಾರಗಳು ಜನಸಂಖ್ಯೆ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಈ ಕುರಿತು ಸೂಕ್ತ ಕಾನೂನನ್ನು ಜಾರಿಗೆ ತರುವುದು ಪ್ರಮುಖ ವಿಚಾರವಾಗಿದೆ’ ಎಂದರು.

ADVERTISEMENT

ಕೇಂದ್ರ ಕಾರಾಗೃಹದ ಜೈಲರ್ ಸಂಜಯಕುಮಾರ ಜತ್ತಿ ಮಾತನಾಡಿ ‘ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾನವ ಸಂಪನ್ಮೂಲವನ್ನು ನಿಯಂತ್ರಿಸ ದಿದ್ದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಸಾಮಾಜಿಕ, ಆರ್ಥಿಕ, ತಾಂತ್ರಿಕ ಕ್ಷೇತ್ರ ಸೇರಿದಂತೆ ನಿರುದ್ಯೋಗ, ಬಡತನ, ಅನಕ್ಷರತೆ, ಮೂಲ ಸೌಕರ್ಯಗಳ ಕೊರತೆ ಪರಿಸರ ನಾಶ, ಅರಣ್ಯ ನಾಶ, ಪರಿಸರ ಮಾಲಿನ್ಯ, ನೀರಿನ ಅಭಾವ ಹೆಚ್ಚಾಗಲಿದೆ’ ಎಂದರು.

ಜಿಲ್ಲಾ ಆಸ್ಪತ್ರೆಯ ಕ್ಷಯ ವಿಭಾಗದ ಉಪ ನಿರ್ದೇಶಕ ಡಾ.ಎಸ್‌.ಗುಂಡಪ್ಪ ಮಾತನಾಡಿದರು.  ಪ್ರಾಧ್ಯಾಪಕ ಪ್ರೊ.ಡಿ. ಎಂ.ಕೊರಬು ಉಪನ್ಯಾಸ ನೀಡಿದರು. ಸುಭಾಸಚಂದ್ರ ಉತ್ತರಕರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಈರಣ್ಣ ಗಾಳಿ, ಡಿ.ಎಸ್. ಗುಡ್ಡೋಡಗಿ, ಶ್ರೀಶೈಲ ತೇಲಿ, ಎಸ್.ಎಚ್. ಕುಲಕರ್ಣಿ, ಜಿ.ಬಿ.ಸಿರಾವೆ, ಕಲ್ಪನಾ ಅಕ್ಕಿ, ಚಂದ್ರು ತೋಟದ, ಹಣಮಂತ ಗಾಣಿಗೇರ ಉಪಸ್ಥಿತರಿದ್ದರು.

ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹತ್ತಿ ನಿರೂಪಿಸಿದರು. ಶ್ರೀಧರ ಪೂಜಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.