ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಹಾಗೂ ಪ್ರತಿಭಟನೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಬಸವರಾಜ ನಾಗೂರ ಮಾತನಾಡಿ, ಐತಿಹಾಸಿಕ, ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿಗೆ ಪ್ರವಾಸಿಗರು ಬಂದು ಹೋಗುತ್ತಾರೆ. ಅಲ್ಲದೇ ಮನಗೂಳಿ -–ಬಿಜ್ಜಳ ಹಾಗೂ ಬಾರಖೇಡ-–ಬೀಳಗಿ ಈ ಎರಡು ರಾಜ್ಯ ಹೆದ್ದಾರಿಗಳು ಪಟ್ಟಣದ ಹೃದಯ ಭಾಗವಾದ ಬಸವೇಶ್ವರ ದೇವಸ್ಥಾನ ಹಾಗೂ ಬಸವೇಶ್ವರ ವೃತ್ತಕ್ಕೆ ಹೊಂದಿಕೊಂಡಿವೆ ಎಂದು ಹೇಳಿದರು.
ಇಂತಹ ಪ್ರಮುಖ ರಸ್ತೆಯ ಮಧ್ಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆ, ರಾಜಕೀಯ ಪಕ್ಷ ಸೇರಿದಂತೆ ಇತರರು ಪ್ರತಿಭಟನೆ ಹಾಗೂ ವಿಜಯೋತ್ಸವಗಳನ್ನು ಆಚರಿಸು ವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ.
ಅಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಇದರಿಂದಾಗಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಹಾಗೂ ವಿಜಯೋತ್ಸವಗಳು ನಡೆಯದಂತೆ ನಿಷೇಧಿಸಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಯಮನಪ್ಪ ಕುದರಿ, ಸುರೇಶ ಹಾರಿವಾಳ, ರಫೀಕ್ ಜೈನಾಪುರ, ಸಂತೋಷ ಕೂಡಗಿ, ಜಗದೀಶ ನಿಕ್ಕಂ, ವಿರೇಶ ಗಬ್ಬೂರ, ಮಲ್ಲು ನಿಕ್ಕಂ, ಮೌನೇಶ ಪತ್ತಾರ, ಸಂತೊಷ ಮಡಿಕೇಶ್ವರ, ಸಂಗಮೇಶ ಜಾಲಗೇರಿ, ಪಿಂಟು ಮದರಿ, ಗುರು ಚೆಟ್ಟೇರ, ಶಿವಾನಂದ ನಾಗರಾಳ, ವಿರೇಶ ಗಬ್ಬೂರ, ದಸ್ತಗೀರ ವಾಲಿಕಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.