ADVERTISEMENT

ಬಾಲ್ಯ ವಿವಾಹ ತಡೆಗೆ ಸಹಕಾರ ಅವಶ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:55 IST
Last Updated 21 ಮೇ 2017, 6:55 IST

ವಿಜಯಪುರ: ಸಮಾಜದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಯಲು ವಿವಿಧ ಇಲಾಖೆಗಳ ಸಹಕಾರ ಅತ್ಯವಶ್ಯ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಭಾರತಿ ಪತ್ತಾರ ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ಬಿಆರ್‌ಪಿ, ಸಿಆರ್‌ಪಿ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ, ಅಂಗನವಾಡಿ ಮೇಲ್ವಿಚಾರಕಿಯರಿಗೆ ಮಕ್ಕಳ ಸಂರಕ್ಷಣೆ ಕುರಿತು ಪಟ್ಟಣದಲ್ಲಿ ಆಯೋಜಿಸಿದ್ದ ತಿಳಿವಳಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಾಲ್ಯ ವಿವಾಹಕ್ಕೆ ಒಳಗಾಗುವ ಮಕ್ಕಳು ಧೈರ್ಯದಿಂದ ಮುಖ್ಯ ಸಹಾಯವಾಣಿಗೆ ಬರುವ ನಿಟ್ಟಿನಲ್ಲಿ ಜಾಗೃತರಾಗುವ ಮೂಲಕ ಬಾಲ್ಯವಿವಾಹದಿಂದ ತಪ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಹಲ ವರ್ಷಗಳಿಂದ ಬಾಲ್ಯ ವಿವಾಹ ಜರುಗುತ್ತಿದ್ದು ಅವುಗಳನ್ನು ತಡೆಗಟ್ಟುವಲ್ಲಿ ಇಲಾಖೆಗಳ ಸಹಕಾರ ಅತಿ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ಮತ್ತು ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಸಬೇಕು ಎಂದರು.

ADVERTISEMENT

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೋಹನಕುಮಾರಿ ಮಾತನಾಡಿ ಪ್ರಸ್ತುತ ದಿನಮಾನದಲ್ಲಿ ಮಕ್ಕಳು ಹಲ ಸಮಸ್ಯೆಗೆ, ದೌರ್ಜನ್ಯಕ್ಕೆ, ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಅಧಿಕಾರಿಗಳು ಸ್ಥಳೀಯ ಮಟ್ಟದಿಂದ ಪ್ರತಿ ಮಗುವಿನ ಚಲನ-ವಲನಗಳನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಎಸ್.ಡಿ.ಗಾಂಜಿ, ಬಿ.ಎಸ್. ಚಲವಾದಿ, ಕೆ.ಶಿವರಾಮ್, ಸುದರ್ಶನ್, ಸುನಂದಾ ತೋಳಬಂದಿ ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೀತಾ ಗುತ್ತರಗಿಮಠ ಸ್ವಾಗತಿಸಿದರು. ಮೌನೇಶ ಪೋತದಾರ ನಿರೂಪಿಸಿದರು. ಬಶೀರ ಪೆಂಡಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.