ADVERTISEMENT

ಮಹಾರಾಷ್ಟ್ರಕ್ಕೆ ₹ 36 ಕೋಟಿ ಮೊತ್ತದ ಡಿ.ಡಿ. ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:41 IST
Last Updated 19 ಮೇ 2017, 6:41 IST

ವಿಜಯಪುರ: ಧೂದ್‌ಗಂಗಾ ಅಂತರ ರಾಜ್ಯ ಯೋಜನೆ ಮತ್ತು ಕೃಷ್ಣಾ ನದಿಗೆ ನೀರು ಹರಿಸುವ ಕುರಿತಂತೆ ಮಹಾ ರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ರಾಜ್ಯದ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಮುಂಬೈಯಲ್ಲಿ ಗುರುವಾರ ಮಾತುಕತೆ ನಡೆಸಿದೆ.

ಧೂದ್‌ಗಂಗಾ ಬಲದಂಡೆ ಕಾಲುವೆ ಅಂತರರಾಜ್ಯ ಯೋಜನೆ. ಎರಡು ರಾಜ್ಯಗಳು ಜಂಟಿಯಾಗಿ ಈ ಯೋಜನೆ ಅನುಷ್ಠಾನಗೊಳಿಸುತ್ತಿವೆ. ಒಟ್ಟು ₹ 363 ಕೋಟಿ ಯೋಜನಾ ಮೊತ್ತದಲ್ಲಿ, ರಾಜ್ಯದ ಪಾಲು ₹ 48 ಕೋಟಿ.

ಈ ಹಣ ವನ್ನು ಮುಂಗಡವಾಗಿ ಪಾವತಿಸುವಂತೆ 2015ರಲ್ಲೇ ಮಹಾರಾಷ್ಟ್ರ ಸರ್ಕಾರ ಕೋರಿತ್ತು. ಇದರಲ್ಲಿ ₹ 36 ಕೋಟಿ ಮುಂಗಡ ಹಣದ ಡಿ.ಡಿ.ಯನ್ನು ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯ ದರ್ಶಿ ರಾಕೇಶ್‌ಸಿಂಗ್ ಅವರು ಮಹಾ ರಾಷ್ಟ್ರದ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಸ್.ಚಾಹಲ್ ಅವರಿಗೆ ಇದೇ ಸಂದರ್ಭ ಹಸ್ತಾಂತರಿಸಿದರು.

ADVERTISEMENT

ಧೂದ್‌ಗಂಗಾ ಯೋಜನೆಯಲ್ಲಿ ನಿಡೋರಿ, ಬಿದ್ರಿ ಉಪ ಕಾಲುವೆಗಳ ಲೈನಿಂಗ್ ಪೂರ್ಣಗೊಳಿಸುವುದರಿಂದ ರಾಜ್ಯಕ್ಕೆ ನಿಡೋರಿ ಕಾಲುವೆಯಿಂದ 85.88 ಕ್ಯುಸೆಕ್‌, ಬಿದ್ರಿ ಕಾಲುವೆಯಿಂದ 130.34 ಕ್ಯುಸೆಕ್‌ ನೀರು ಲಭ್ಯವಾಗಲಿದೆ.

ನೀರು ಬಿಡುಗಡೆಗೆ ಮನವಿ: ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಇದೇ ಸಂದರ್ಭ ಐ.ಎಸ್. ಚಾಹಲ್  ಜತೆ ದೂರವಾಣಿಯಲ್ಲಿ ಮಾತನಾಡಿ, ‘ಈ ಹಿಂದೆ ನಮ್ಮ ಮನವಿಗೆ ಸ್ಪಂದಿಸಿ  2 ಟಿ.ಎಂ.ಸಿ ಅಡಿ ನೀರು ಹರಿಸಿದ್ದೀರಿ. ಇದರಿಂದ ಬೆಳಗಾವಿ ಜಿಲ್ಲೆಗೆ ಅನುಕೂಲ ವಾಗಿದೆ.

ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿ ಬತ್ತಿದ್ದು,   ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು ನಿವಾರಣೆಗಾಗಿ 3.5 ಟಿಎಂಸಿ ಅಡಿ ನೀರು ಹರಿಸಿ’ ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.