ADVERTISEMENT

ಮೊಬೈಲ್‌ ಟವರ್‌ ಏರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 5:33 IST
Last Updated 5 ಸೆಪ್ಟೆಂಬರ್ 2015, 5:33 IST

ವಿಜಯಪುರ: ತಾಲ್ಲೂಕಿನ ಹೊನ್ನುಟಗಿ ಗ್ರಾಮ­ದಲ್ಲಿ ತಾಲ್ಲೂಕು ಆಡಳಿತ ಅನ­ಧಿಕೃತ ಮನೆಗಳನ್ನು ತೆರವು ಗೊಳಿಸಿದ್ದನ್ನು ಖಂಡಿಸಿ ಮದ್ಯದ ಅಮಲಿನಲ್ಲಿ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಪ್ರತಿಭಟಿ­ಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಬಸವರಾಜ ಶಂಕ್ರಪ್ಪ ಕುಳ್ಳೂರಗಿ ಮೊಬೈಲ್‌ ಟವರ್‌ ಮೇಲೇರಿದ್ದ ಯುವಕ. ಗ್ರಾಮದಲ್ಲಿನ 200 ಅಡಿ ಎತ್ತರದ ಟವರ್‌ ಅನ್ನು ಯುವಕ ಸಂಜೆ 6.30ರ ಆಸು­ಪಾಸು ಮೇಲೇರಿ ತನಗಾದ ಅನ್ಯಾಯಕ್ಕೆ ಪ್ರತಿಭಟಿಸಿದ. ಹೊನ್ನುಟಗಿಯಲ್ಲಿ ತಾಲ್ಲೂಕು ಆಡಳಿತ ಪೊಲೀಸರ ಸಹಕಾರದಿಂದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಸಂದರ್ಭ ತನ್ನ ಮನೆಗೂ ಹಾನಿಯಾಗಿದೆ. ಇರಲು ಜಾಗವಿಲ್ಲ ಎಂದು ಟವರ್ ಮೇಲಿಂದಲೇ ಘೋಷಣೆಗಳನ್ನು ಕೂಗಿದ.

ವಿಷಯ ತಿಳಿದ ವಿಜಯಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತ ಯುವಕನ ಮನವೊಲಿಸಲು ಮುಂದಾದರು. ನ್ಯಾಯ ದೊರಕುವ ತನಕ ಟವರ್‌ನಿಂದ ಕೆಳಗೆ ಇಳಿಯು­ವುದಿಲ್ಲ ಎಂದು ಯುವಕ ಪಟ್ಟು ಹಿಡಿದ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪೊಲೀಸರು ಅನಿವಾರ್ಯವಾಗಿ ವಿಜಯಪುರದ ಅಗ್ನಿಶಾಮಕ ದಳದ ಸಿಬ್ಬಂದಿ ಮೊರೆ ಹೋದರು. ತಕ್ಷಣವೇ ನೆರವಿಗೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಮನವೊಲಿಕೆಗೆ ಸಾಕಷ್ಟು ಹರಸಾಹಸಪಟ್ಟರು. ಯುವಕ ಜಿಲ್ಲಾಧಿ­ಕಾರಿ, ಜಿಲ್ಲಾ ಉಪವಿಭಾಗಾಧಿಕಾರಿ ಸ್ಥಳಕ್ಕೆ ಬಂದು ತನಗಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಪಟ್ಟುಹಿಡಿದ.

ಅಗ್ನಿಶಾಮಕ ಸಿಬ್ಬಂದಿ ಜೆ.ಎಂ.ಅತ್ತಾರ ಟವರ್‌ ಮೇಲೇರಿ ಆ ಯುವಕನೊಂದಿಗೆ ಮಾತುಕತೆ ನಡೆಸಿ ಮೊಬೈಲ್‌ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿಸುವ ಮೂಲಕ ಮನವೊಲಿಸಿ ಮೊಬೈಲ್‌ ಟವರ್‌ನಿಂದ ಕೆಳಗಿಳಿಸಲಾಯಿತು ಎಂದು ಅಗ್ನಿಶಾಮಕ ಠಾಣಾಧಿಕಾರಿ ಎಸ್‌.ಎಚ್.­ನದಾಫ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು. ಯುವಕನನ್ನು ವಿಜಯಪುರ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಆತ ಮದ್ಯದ ನಶೆಯಲ್ಲಿದ್ದ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.