ADVERTISEMENT

ವಿವಿಧಡೆ ಮಳೆ: ರೈತರಲ್ಲಿ ಸಂತಸ

ಆರಿದ್ರಾ ಕೈಕೊಟ್ಟಿದ್ದರಿಂದ ಆತಂಕದಲ್ಲಿದ್ದ ರೈತರಿಗೆ ಹರ್ಷ ತಂದ ಪುನರ್ವಸು

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:32 IST
Last Updated 10 ಜುಲೈ 2017, 10:32 IST

ವಿಜಯಪುರ:  ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಭಾನುವಾರ ಸಂಜೆ ಮಳೆಯಾಗಿದೆ. ವಿಜಯಪುರ ನಗರ, ದೇವರ ಹಿಪ್ಪರಗಿ, ತಾಂಬಾ, ಇಂಡಿ, ಬಸವನಬಾಗೇವಾಡಿ ಭಾಗದಲ್ಲಿ ಮಳೆಯಾಗಿದೆ. ನಗರದಲ್ಲಿ ಬೆಳಿಗ್ಗೆ ಮಳೆ ಬರುವ ಲಕ್ಷಣಗಳು ಗೋಚರಗೊಳ್ಳ ದಿದ್ದರೂ ಸಂಜೆ 5ರ ಸುಮಾರಿಗೆ ಆರಂಭ ವಾದ ಮಳೆ ಸುಮಾರು ಒಂದು ಗಂಟೆ ಸುರಿಯಿತು.

ಮುಂಗಾರು ಬಿತ್ತನೆ ಮಾಡಿ ಮಳೆ ಗಾಗಿ ಕಾದು ಕುಳಿದ ಅನ್ನದಾತನ ಪ್ರಾರ್ಥನೆಗೆ ವರುಣದೇವ ಕೃಪೆ ತೋರಿದ್ದಾನೆ. ಆರಿದ್ರಾ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ  ಆತಂಕದಲ್ಲಿದ್ದ ರೈತರ ಮೊಗದಲ್ಲಿ ಪುನರ್ವಸು ಮಳೆ ಸಂತಸ ಮೂಡಿಸಿದೆ. 

ಉತ್ತಮ ಮಳೆ
ದೇವರಹಿಪ್ಪರಗಿ :
ಪಟ್ಟಣ ಸೇರಿದಂತೆ ಸುತ್ತಮುತ್ತಲು ಭಾನುವಾರ ಸಂಜೆ ಒಂದು ತಾಸು ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಮಳೆಗಾಲ ಪ್ರಾರಂಭವಾದಾಗಿನಿಂದ ಇದು ಎರಡನೇ ಭಾರಿ ಉತ್ತಮ ಮಳೆಯಾಗಿದೆ.

ADVERTISEMENT

ಜೂನ್ ಎರಡನೇ ವಾರದಲ್ಲಿ ಮಾತ್ರ ಒಂದು ಸಲ ಉತ್ತಮ ಮಳೆಯಾಗಿತ್ತು. ಹಲವು ದಿನಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ಜನರಿಗೆ ಜೀವ ಮರಳಿ ಬಂದಂತಾಗಿದೆ.
ಬಹುತೇಕ ರೈತರು ಸಾಲ ಮಾಡಿ ಭೂಮಿ ಹದಗೊಳಿಸಿ ಬೀಜ ಗೊಬ್ಬರ ಹಾಕಿ ಬಿತ್ತನೆ ಕಾರ್ಯ ಮಾಡಿದ್ದರು. ಬೀಜ ಮೊಳಕೆಯೊಡೆಯುವ ಸಮಯ ದಲ್ಲಿ ಮಳೆಯೆಲ್ಲದೇ ಮಾಯವಾಗಿತ್ತು. ಇಂದಿನ ಮಳೆಯಿಂದ ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿವೆ. 

ಮಳೆಗೆ ಸ್ವಚ್ಛವಾದ ಪಟ್ಟಣ:  ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆ ಪಟ್ಟಣ ವನ್ನೆಲ್ಲ ಸ್ವಚ್ಛವಾಗಿಸಿದೆ. ಗಬ್ಬು ನಾರುತ್ತಿದ್ದ ಒಳಚರಂಡಿಗಳು, ರಸ್ತೆಗಳೆಲ್ಲ ಮಳೆ ನೀರಿ ಯಿಂದ ಸ್ವಚ್ಛವಾದಂತೆ ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.