ADVERTISEMENT

ಶರಣ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:52 IST
Last Updated 3 ಮಾರ್ಚ್ 2017, 6:52 IST

ಬಸವನಬಾಗೇವಾಡಿ: ಪಟ್ಟಣದ ಮಸಬಿನಾಳ ರಸ್ತೆಯಲ್ಲಿನ ಗಣೇಶ ದೇವಸ್ಥಾನದ ಆವರಣದಲ್ಲಿ ಮಾರ್ಚ್‌ 4 ಮತ್ತು 5 ರಂದು ನಡೆಯಲಿರುವ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನಕ್ಕಾಗಿ ಭರದ ಸಿದ್ದತೆ ನಡೆದಿದೆ.

ಶರಣ ಸಾಹಿತ್ಯ ಪರಿಷತ್‌ ಪದಾಧಿ ಕಾರಿಗಳು ಸೇರಿದಂತೆ ವಿವಿಧ ಸಂಘ ಟನೆಯ ಪದಾಧಿಕಾರಿಗಳು ಸಮ್ಮೇಳನದ ಯಶಸ್ವಿಗಾಗಿ ಹಲವು ದಿನಗಳಿಂದ ಶ್ರಮಿ ಸುತ್ತಿದ್ದಾರೆ. ಸ್ಥಳೀಯ ಗಣೇಶ ದೇವಸ್ಥಾನ ಆವರಣದಲ್ಲಿ ವಿಶಾಲ ವಾದ ಶಾಮಿಯಾನ, ಪುಸ್ತಕ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳನ್ನು ಹಾಕಲಾಗಿದೆ.

ಬುಧವಾರ ಸಂಜೆ ಶಾಮಿಯಾನ ಪರಿಶೀಲಿಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಆಧ್ಯಕ್ಷ ವಿ.ಬಿ. ಮರ್ತುರ,  ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಶರಣ ಸಾಹಿತ್ಯ ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.  ಎರಡು ದಿನದ ಸಮ್ಮೇಳನದಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.

ಬಸವ ಪ್ರಶಸ್ತಿ ಪುರಸ್ಕ್ರತ ಸಾಹಿತಿ ರಂಜಾನ್‌ ದರ್ಗಾ ಸಮ್ಮೇಳನಾಧ್ಯಕ್ಷ ರಾಗಿದ್ದು. ವಚನ ಗ್ರಂಥ ಹಾಗೂ ಸಮ್ಮೇಳ ನಾಧ್ಯಕ್ಷರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಬಸವನಬಾಗೇವಾಡಿಯ ಐತಿಹಾಸಿಕ ಹಿನ್ನೆಲೆ, ವಚನ ಸಾಹಿತ್ಯ ಪುನರುಜ್ಜೀವನ, ವಚನಕಾರ್ತಿಯರಲ್ಲಿ ಸಾಮಾಜಿಕ ಪ್ರಜ್ಞೆ, ವಚನ ಸಾಹಿತ್ಯ ಸಂಕೀರ್ಣ, ವಚನಗಳಲ್ಲಿ ವೈಜ್ಞಾನಿಕತೆ, ಅರ್ಥಹೀನ ಸಂಪ್ರದಾಯ, ಯುವ ಜನತೆಯಲ್ಲಿ ಕಾಯಕ ಪ್ರಜ್ಞೆ ವಿಷಯಗಳ ಮೇಲೆ ಉಪನ್ಯಾಸ ನಡೆಯಲಿದೆ. ಜೊತೆಗೆ ಸ್ವರಚಿತ ಕವನ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಎಸ್‌.ಎಸ್. ಝಳಕಿ, ಎಂ.ಎಸ್‌.ಕೊಟ್ಲಿ, ಎಚ್‌.ಎಸ್‌. ಬಿರಾದಾರ, ವೀರೇಶ ಕುಂಟೋಜಿ, ಯುವರಾಜ ಮಾದನ ಶೆಟ್ಟಿ, ಎಸ್‌.ಎ. ದೇಗಿನಾಳ,  ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಜಿ. ಅಳ್ಳಗಿ, ಕದಳಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಶರಣ ಸಾಹಿತ್ಯ ಪರಿಷತ್‌ ಯುವ ಘಟಕದ ಅಧ್ಯಕ್ಷ ಗುರುರಾಜ ಕನ್ನೂರ, ರಾಜುಗೌಡ ಚಿಕ್ಕೊಂಡ, ಲಲಿತಕುಮಾರ ಹಗರಗುಂಡ, ಎಸ್.ಬಿ.ಮುತ್ತಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.