ADVERTISEMENT

ಸಮಾನತೆ: ಸಂವಿಧಾನ ನೀಡಿದ ಅವಕಾಶ

ವಿಜಯಪುರದಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಸಂದೇಶದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 8:35 IST
Last Updated 28 ಜನವರಿ 2017, 8:35 IST
ಸಮಾನತೆ: ಸಂವಿಧಾನ ನೀಡಿದ ಅವಕಾಶ
ಸಮಾನತೆ: ಸಂವಿಧಾನ ನೀಡಿದ ಅವಕಾಶ   

ವಿಜಯಪುರ: ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಂಸ್ಕೃತಿಕ ಸಮಾ ನತೆಗೆ ಸಂವಿಧಾನ ನ್ಯಾಯಯುತ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ 68ನೇ ಗಣ ರಾಜ್ಯೋತ್ಸವದ ಪ್ರಯುಕ್ತ ಗುರುವಾರ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ಸಂವಿಧಾನದ ಮೌಲ್ಯಯುತ ಪರಂಪರೆ ಯನ್ನು ರಕ್ಷಿಸಿ, ಮುನ್ನಡೆಸಿಕೊಂಡು ಹೋಗಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಲ್ಲಿನ ಕಾನೂನಿನ ಪಾಂಡಿತ್ಯ, ಪ್ರತಿ ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ಸೂಕ್ಷ್ಮತೆ, ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿ ರೂಪಗೊಳ್ಳಲು ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನ ಶಿಲ್ಪಿ, ಸಂವಿಧಾನ ಪಿತಾಮಹ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ವರ್ಣಿಸುವುದು ಅತ್ಯಂತ ಅರ್ಥಪೂರ್ಣ ಎಂದರು.

ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ತಮ್ಮ ಸಂದೇಶದಲ್ಲಿ ವಿವರಿಸಿದ ಸಚಿವರು, 50 ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕೈಗೊಂಡಿದ್ದು, ಈಗಾ ಗಲೇ 23 ಯೋಜನೆಗಳನ್ನು ಪೂರ್ಣ ಗೊಳಿಸಿ 336 ಜನ ವಸತಿಗಳಿಗೆ ಶುದ್ಧ ಕುಡಿಯುವ  ನೀರು ಒದಗಿಸಲಾಗಿದೆ.

2017ರ ಮಾರ್ಚ್‌ ಅಂತ್ಯದವರೆಗೆ 14 ಯೋಜನೆಗಳನ್ನು ಪೂರ್ಣಗೊಳಸಿ, 424 ಜನ ವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದ ಲಾಗಿದೆ. ₹ 400 ಕೋಟಿ ವೆಚ್ಚದಲ್ಲಿ 1049 ಜನ ವಸತಿಗಳ ಪೈಕಿ 760 ಜನ ವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ 521 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ  475 ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯ ಅಂತರ್ಜಲ ಹೆಚ್ಚಳಕ್ಕೆ ನೈಸರ್ಗಿಕ ನದಿ ಕೊಳ್ಳಗಳಿಗೆ ಅಡ್ಡಲಾಗಿ 20 ಚೆಕ್ ಡ್ಯಾಂ ನಿರ್ಮಿಸಲು ಅಂದಾಜು ₹ 20 ಕೋಟಿ ಮೀಸಲಿಟ್ಟಿದ್ದು, 8 ಕಾಮಗಾರಿ ಗಳನ್ನು ಪೂರ್ಣಗೊಳಿಸ ಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ₹ 12.70 ಕೋಟಿ ಅಂದಾಜು ಮೊತ್ತದ 17 ಕಾಮಗಾರಿಗಳ ಪೈಕಿ 8 ಕಾಮಗಾರಿ ಮುಗಿದಿವೆ ಎಂದು ಹೇಳಿದರು.

ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ 27 ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರ್ಕಾರ ಮಂಜೂರಾತಿ ನೀಡಿದ್ದು, ₹ 30.75 ಕೋಟಿ ಅನುದಾನ ನಿಗದಿಪಡಿಸಿದೆ. ಈಗಾಗಾಲೇ ಇದಕ್ಕಾಗಿ ₹ 14.40 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 

ಕೃಷಿ ಭಾಗ್ಯ ಯೋಜನೆಯಡಿ ಮಳೆ ಯಾಶ್ರಿತ ರೈತರ ಸಮುದಾಯದ ಜೀವನೋಪಾಯವನ್ನು ಉತ್ತಮ ಗೊಳಿಸಲು 8950 ರೈತರಿಗೆ ಪಾಲಿಹೌಸ್ ರಹಿತ, 60 ಜನ ರೈತರು ಪಾಲಿಹೌಸ್ ಸಹಿತ ಕೃಷಿ ಹೊಂಡಗಳನ್ನು ನಿರ್ಮಿಸಿ ಕೊಂಡಿದ್ದು. ಇದಕ್ಕಾಗಿ ₹ 63.99 ಕೋಟಿ ಸಹಾಯಧನ ಒದಗಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ವಿಜಯಪುರ, ಇಂಡಿ ತಾಲ್ಲೂಕುಗಳಲ್ಲಿ ಮೂರು ಸಂಚಾರಿ ಆರೋಗ್ಯ ಘಟಕಗಳನ್ನು ಆರಂಭಿಸ ಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ  ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಸಾಂಕ್ರಾಮಿಕ ರೋಗಗಳ ಹೆಚ್ಚಿನ ತಪಾಸಣೆಗೆ ಉಚಿತ ಚಿಕಿತ್ಸೆ ನೀಡಲಾಗು ತ್ತಿದೆ ಎಂದರು. ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಮುಂಗಾರಿನಲ್ಲಿ 15374 ರೈತರು, ಹಿಂಗಾರಿನಲ್ಲಿ 70187 ರೈತರು ಬೆಳೆವಿಮೆಗೆ ನೋಂದಣಿ ಮಾಡಿ ಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸಚಿವ ರಮೇಶ ಜಿಗಜಿಣಗಿ, ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ, ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಅಭಿವೃದ್ಧಿ ನಿಯ ಮಿತದ ಅಧ್ಯಕ್ಷ ಪ್ರೊ.ರಾಜು ಆಲಗೂರ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ, ಬಸನಗೌಡ ಪಾಟೀಲ ಯತ್ನಾಳ, ಜಿ.ಪಂ.ಅಧ್ಯಕ್ಷೆ ನೀಲಮ್ಮ ಮೇಟಿ, ಮೇಯರ್ ಅನೀಸ್‌ಫಾತಿಮಾ ಭಕ್ಷಿ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ, ಎಸ್ಪಿ ಎಸ್.ಎನ್‌. ಸಿದ್ಧರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.