ADVERTISEMENT

‘ಧರ್ಮ ಮಾರ್ಗದಲ್ಲಿ ಹಣ ಗಳಿಸಿ’

ಸಿದ್ಧಸಿರಿ ಸೌಹಾರ್ದದ ದಶಮಾನೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 30 ಮೇ 2016, 6:21 IST
Last Updated 30 ಮೇ 2016, 6:21 IST

ವಿಜಯಪುರ: ಧರ್ಮ ಮಾರ್ಗದಲ್ಲಿ ಹಣ ಗಳಿಸಿ ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಗದಗ-–ಡಂಬಳ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ನಗರದ ಸಂಗನಬಸವ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆದ ಸಿದ್ಧಸಿರಿ ಸೌಹಾರ್ದ ನಿಯಮಿತದ ದಶಮಾನೋತ್ಸವ ಸಮಾರಂಭದಲ್ಲಿ ಆಶೀವರ್ಚನ ನೀಡಿದ ಸ್ವಾಮೀಜಿ, ಸಂಪಾದಿಸಿದ ಹಣವನ್ನು ಉತ್ತಮ ಕಾರ್ಯಗಳಿಗೆ ಖರ್ಚು ಮಾಡಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಧರ್ಮ, ಅರ್ಥ, ಕಾಮ, ಮೋಕ್ಷದ ತಾತ್ಪರ್ಯ ವಿವರಣೆ ನೀಡಿದರು.

ಸೌಹಾರ್ದ, ಸಹಕಾರ ಸಂಘಗಳ ಪ್ರಗತಿಯಿಂದಾಗಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಬೀಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಗುರುನಾಥ ಜಾಂತಿಕರ ಹೇಳಿದರು.

ಸೌಹಾರ್ದ, ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳುತ್ತಿವೆ. ಜನಸಾಮಾನ್ಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ನಿರತವಾಗಿವೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಬೀಳುತ್ತಿದೆ ಎಂದರು. 

ಬ್ಲಡ್ ಬ್ಯಾಂಕ್‌ ಸ್ಥಾಪನೆ:  ಸಿದ್ಧಸಿರಿ ಸೌಹಾರ್ದ ವತಿಯಿಂದ ಶೀಘ್ರವೇ ನಗರದಲ್ಲಿ ಸುಸಜ್ಜಿತವಾದ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಸಿದ್ಧಸಿರಿ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದರು.

24X7 ಕಾರ್ಯ ನಿರ್ವಹಿಸುವ ಸುಸಜ್ಜಿತವಾದ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಸಿದ್ಧಸಿರಿ ಸಿಬ್ಬಂದಿ ರಕ್ತದಾನ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ಕಾರ್ಯಕ್ಕಾಗಿಯೇ ವಿಶೇಷ ವ್ಯಾಟ್ಸ್ಆ್ಯಪ್ ಗ್ರೂಪ್ ಸಹ ಮಾಡಿಕೊಂಡಿದ್ದಾರೆ. ಬ್ಲಡ್ ಬ್ಯಾಂಕ್ ಸ್ಥಾಪನೆಯಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದರು.

ಗುರು ಗಚ್ಚಿನಮಠ, ನಿರ್ದೇಶಕರಾದ ಬಸಯ್ಯ ಹಿರೇಮಠ, ಶಿವಾನಂದ ಅಣೆಪ್ಪನವರ, ಪ್ರಭು ದೇಸಾಯಿ, ಸಾಯಿಬಾಬಾ ಸಿಂಧಗೇರಿ, ಜಗದೀಶ ಕ್ಷತ್ರಿ, ರಮೇಶ ಬಿರಾದಾರ, ವಿಜಯಕುಮಾರ ಚವ್ಹಾಣ, ಅಶೋಕ ತೊರವಿ, ಮುತ್ತು ಜಂಗಮಶೆಟ್ಟಿ, ಎಂ.ಡಿ.ಶಂಕರಗೌಡ ಪಾಟೀಲ, ರಾಘವ ಅಣ್ಣಿಗೇರಿ, ವಿಜಯಕುಮಾರ ಡೋಣಿ, ಚಂದ್ರು ಚೌಧರಿ, ಎನ್.ಎಸ್.ಬಿರಾದಾರ, ಬಸವರಾಜ ಮರನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.