ನಿಡಗುಂದಿ: ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಸ್ಥಳೀಯ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಸ್ವಾಮಿ ವಿವೇಕಾನಂದರ 154ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಕ್ರಮದಲ್ಲಿ ಕಾಲೇಜಿನ ಕೃಷ್ಣ ಪವಾರ್ ವಿದ್ಯಾರ್ಥಿ 140 ಕೆಜಿ ತೂಕದ ಜೋಳದ ಚೀಲದ ಜತೆಗೆ ಅದರಲ್ಲಿ 40 ಕೆಜಿ ತೂಕದ ಕಲ್ಲು ಸೇರಿ ಒಟ್ಟು 160 ಕೆಜಿ ಭಾರ ಎತ್ತುವ ಮೂಲಕ ಸಾಹಸ ಮೆರೆದಿದ್ದಾರೆ.
ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳ ಮೇಲೆ ಪರಿಣಾಮ ಉಂಟು ಮಾಡುವುದರ ಜತೆಗೆ ವಿವೇಕಾನಂದರ ವಾಣಿಯನ್ನು ಗ್ರಾಮಸ್ಥರಿಗೆ ತಿಳಿಸಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಎನ್ಎಸ್ಎಸ್ ವಿಶೇಷ ಘಟಕದಡಿ ಕಾಲೇಜು ಆವರಣದಲ್ಲಿ ಸ್ವಯಂಪ್ರೇರಿತ ಶ್ರಮದಾನ ಮಾಡಲಾಯಿತು. ಸಪ್ತಾಹ ನಿಮಿತ್ತ ‘ಸಾರ್ವತ್ರಿಕ ಸಾಕ್ಷರತೆಯಲ್ಲಿ ಯುವಜನತೆಯ ಪಾತ್ರ’ ವಿಷಯ ಕುರಿತು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಗ್ರಾಮೀಣ ಕ್ರೀಡೆಗಳಾದ ಗುಂಡು ಎತ್ತುವದು, ಹಲಗೆ ಬಾರಿಸುವದು, ಕಬಡ್ಡಿ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಗಳಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಅಮೃತ ಯಾದವ, ಸಾವರ್ಕರ್ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಅಮರೇಶಗೌಡ ಪಾಟೀಲ, ಕಾಲೇಜಿನ ಪ್ರಾಚಾರ್ಯೆ ವಿಜಯಾ ಪುರೋಹಿತ, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.