ಕೆಂಭಾವಿ: 15ನೇ ವರ್ಷದ ಕರಡಕಲ್ ಕಲ್ಯಾಣ ಮಹೋತ್ಸವ ಜಾತ್ರೆ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಸಮೀಪದ ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದಲ್ಲಿ ಗುರುವಾರ (ಮೇ 28) ಜರುಗಲಿದೆ.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ 10 ಸಾಧಕರನ್ನು ಗುರುತಿಸಿ, ಸಗರನಾಡು ಸೇವಾ ಪ್ರತಿಷ್ಠಾನ ವತಿಯಿಂದ ‘ಕೋರಿಸಿದ್ದೇಶ್ವರ ಕೃಪಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲವಾರದ ತೋಟೆಂದ್ರ ಶ್ರೀಗಳ ಸಾನ್ನಿಧ್ಯ ಹಾಗೂ ಕರಕಡಲ್ ಶಾಂತರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಸಾಹಿತಿ ಸಿದ್ದರಾಮ ಹೊನಕಲ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವಾಮನರಾವ ದೇಶಪಾಂಡೆ, ರೈತ ಮುಖಂಡ ಡಾ. ಶರಣಪ್ಪ ಯಾಳಗಿ ಸತ್ಯಂಪೇಟ, ಪತ್ರಕರ್ತ ಪವನ ಕುಲಕರ್ಣಿ, ಪರಿಸರವಾದಿ ಲಿಂಗರಾಜ ಶಾಸ್ತ್ರೀ, ಸಂಶೋಧಕ ಧರ್ಮಣ್ಣ ಬಡಿಗೇರ್, ಪ್ರವಚನಕಾರ ಬಸವೇಶ್ವರ ಗದ್ದುಗಿಮಠ, ಜಾನಪದ ಜಾದೂಗಾರ ಎಸ್.ಎಂ.ಭಕ್ತ ಕುಂಬಾರ, ಹಿರಿಯ ಸಂಗೀತಗಾರ ಮಹಾಂತೇಶ ಹುಲ್ಲೂರ, ಜಾನಪದ ಗಾಯಕ ಸುರೇಶ ಇಂಚಗೇರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಜನ್ಮ ಸುವರ್ಣ ಮಹೋತ್ಸವ: ಇದೇ ಸಮಾರಂಭದಲ್ಲಿ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನಮಠದ ತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ 50ನೇ ವರ್ಷದ ಜನ್ಮ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು.
ಸುವರ್ಣ ಮಹೋತ್ಸವದ ಪ್ರಯುಕ್ತ 50 ಜೋಡಿ ಸಾಮೂಹಿಕ ವಿವಾಹ, 50 ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ತೋಟೆಂದ್ರ ಶಿವಾಚಾರ್ಯರ ಸಾಂಸ್ಕೃತಿಕ ವೇದಿಕೆ ಉದ್ಟಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಿಜಯಪುರ ವನಶ್ರೀ ಸಂಸ್ಥಾನ ಮಠದ ಜಯದೇವ ಸ್ವಾಮೀಜಿ, ನಾಲವಾರದ ತೋಟೆಂದ್ರ ಶಿವಾಚಾರ್ಯರು, ಕರಡಕಲ್ಲದ
ಶಾಂತರುದ್ರಮುನಿ ಸ್ವಾಮೀಜಿ, ಮುದನೂರು, ಕೊಡೆಕಲ್, ನಾವದಗಿ, ಯಡ್ರಾಮಿ, ಶಹಾಪುರ, ನಗನೂರ, ಕೆಂಭಾವಿ, ಕೈರಾವಡಗಿ ಸ್ವಾಮೀಜಿಗಳು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.