ADVERTISEMENT

ನಗರಸಭೆಯ ಏಳು ಸದಸ್ಯರು ಅನರ್ಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 6:11 IST
Last Updated 20 ಡಿಸೆಂಬರ್ 2017, 6:11 IST

ಯಾದಗಿರಿ: ಪಕ್ಷದ ವಿಪ್‌ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದ ಇಲ್ಲಿನ ನಗರ ಸಭೆಯ ಕಾಂಗ್ರೆಸ್ ಪಕ್ಷದ ಏಳು ಸದಸ್ಯರನ್ನು ಸದಸ್ಯತ್ವದಿಂದ ಅನರ್ಹ ಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಅಕ್ಕಮಹಾದೇವಿ (3ನೇ ವಾರ್ಡ್), ಮಹ್ಮಮದ್ ಇಬ್ರಾಹಿಂಸಾಬ್ (13ನೇ ವಾರ್ಡ್), ಮಹಮ್ಮದ್ ಕಲಾಂ (16ನೇ ವಾರ್ಡ್), ಶರಣಮ್ಮ (23ನೇ ವಾರ್ಡ್), ಶಿವಕುಮಾರ್ (25ನೇ ವಾರ್ಡ್), ಶಶಿಧರರಡ್ಡಿ ಹೊಸಳ್ಳಿ (30ನೇ ವಾರ್ಡ್), ಬಸವರಾಜ ಜೈನ್ (21ನೇ ವಾರ್ಡ್) ಅವರು ಅನರ್ಹಗೊಂಡವರು.

ಅಧ್ಯಕ್ಷರಾಗಿದ್ದ ಶಶಿಧರರಡ್ಡಿ ಹೊಸಳ್ಳಿ ಅವರು ಏಪ್ರಿಲ್ 10ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಮೇ 3ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಪಕ್ಷೇತರರಾಗಿ ಗೆದ್ದು ನಗರಸಭೆ ಸದಸ್ಯರಾಗಿದ್ದ ಲಲಿತಾ ಅನಪೂರ ಹಾಗೂ ಕಾಂಗ್ರೆಸ್ ಸದಸ್ಯ ಶಂಕರ ರಾಠೋಡ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಸ್ಪರ್ಧಿಸಿದ್ದರು.

ADVERTISEMENT

ಈ ಸಂದರ್ಭದಲ್ಲಿ ಒಟ್ಟು 11 ಮಂದಿ ಕಾಂಗ್ರೆಸ್ ಸದಸ್ಯರಲ್ಲಿ ಈ ಏಳು ಮಂದಿ ಪಕ್ಷದ ಅಭ್ಯರ್ಥಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದರು. ಕಾಂಗ್ರೆಸ್ ಪಕ್ಷದ ಶಂಕರ್‌ ರಾಠೋಡ ಶಾಸಕರು ಹಾಗೂ ಮೂವರು ಸದಸ್ಯರು ಸೇರಿದಂತೆ ಒಟ್ಟು ನಾಲ್ಕು ಮತಗಳನ್ನು ಪಡೆಯುವ ಮೂಲಕ ಮುಖಭಂಗ ಅನುಭವಿಸಿದ್ದರು.

ಏಳು ಮಂದಿ ಸದಸ್ಯರು ಪಕ್ಷದ ವಿಪ್‌ ಉಲ್ಲಂಘಿಸಿದ್ದು, ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್ ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಕರ್ನಾಟಕ ಸ್ಥಳೀಯ ಸಂಸ್ಥೆಗಳ ಅಧಿನಿಯಮ 1984ರ ಕಾಯ್ದೆ 31ಬಿ ಅನ್ವಯ ಏಳು ಮಂದಿಯ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ.

ಅಧ್ಯಕ್ಷರಿಗೆ ಅವಿಶ್ವಾಸದ ಭಯ?

ನಗರಸಭೆಯಲ್ಲಿ 31 ಮಂದಿ ಚುನಾಯಿತ ಸದಸ್ಯರು ಇದ್ದಾರೆ. ಅದರಲ್ಲಿ ಈಗ ಏಳು ಮಂದಿ ಸದಸ್ಯತ್ವ ಕಳೆದುಕೊಂಡಿದ್ದಾರೆ. ಈಗ ಕಾಂಗ್ರೆಸ್‌– 4 , ಜೆಡಿಎಸ್‌–8, ಬಿಜೆಪಿ– 7, ಬಿಎಸ್‌ಆರ್ ಕಾಂಗ್ರೆಸ್‌–4, ಪಕ್ಷೇತರ–1 ಸೇರಿದಂತೆ ಒಟ್ಟು 24 ಮಂದಿ ಸದಸ್ಯರಿದ್ದಾರೆ. ಇರುವ ಸದಸ್ಯರಲ್ಲಿ ಅಧ್ಯಕ್ಷರ ವಿರುದ್ಧ ಯಾರು ಅವಿಶ್ವಾಸಕ್ಕೆ ಅರ್ಜಿ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೆ, ಅವಿಶ್ವಾಸ ಮಂಡಿಸದಿದ್ದರೆ ಲಲಿತಾ ಅನಪೂರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನುತ್ತವೆ ನಗರಸಭೆ ಮೂಲಗಳು.

* * 

ವಿಚಾರಣೆಯಲ್ಲಿ ಸದಸ್ಯರು ಪಕ್ಷದ ನಿಮಯಗಳನ್ನು ಉಲ್ಲಂಘಿಸಿರುವುದು ಖಚಿತಪಟ್ಟಿದೆ. ಎಲ್ಲ ಮೂಲಗಳಿಂದ ವಿಚಾರಣೆ ಕೈಗೊಂಡಾಗ ಸದಸ್ಯರ ವಿಪ್ ಉಲ್ಲಂಘನೆ  ಸ್ಪಷ್ಟವಾಗಿದೆ.
ಜೆ.ಮಂಜುನಾಥ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.