ಸುರಪುರ: ‘ಸೋದರಿ ನಿವೇದಿತಾ ಸ್ವಾಮಿ ವಿವೇಕಾನಂದರ ಮಾನಸ ಪುತ್ರಿ. ಭಾರತಮಾತೆಗೆ ನಿವೇದನೆಗೊಂಡ ಐರ್ಲ್ಯಾಂಡಿನ ಪುಷ್ಪ. ಕ್ರಾಂತಿಕಾರಿಗಳಿಗೆ ದೀಕ್ಷೆಕೊಟ್ಟ ಗುರುಸ್ವರೂಪಿಣಿ’ ಎಂದು ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾ ಶಿವಮೊಗ್ಗ ಬಣ್ಣಿಸಿದರು.
ಮಂಗಳವಾರ ನಗರದ ರಂಗಂಪೇಟೆಯ ಜೀಹ್ವೇಶ್ವರ ಕಲ್ಯಾಣ ಮಂಟಪದಲ್ಲಿ ಧನ್ಯೋಸ್ಮಿ ಭರತ ಭೂಮಿ ತಂಡದಿಂದ ಸೋದರಿ ನಿವೇದಿತಾ 150ನೇ ಜನ್ಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಸೋದರಿ ನಿವೇದಿತಾ ಭಾರತಕ್ಕೆ ಬಂದು ಸ್ವಾಮಿ ವಿವೇಕಾನಂದರ ಶಿಷ್ಯಳಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರು ಶಿಕ್ಷಣ ಕ್ಷೇತ್ರದ ಧೃವತಾರೆ. ಸ್ವತಂತ್ರ ಮನೋಭಾವ ಮತ್ತು ಗುರುಗಳ ಪಾದಕ್ಕೆ ಸಮರ್ಪಿಸಿಕೊಂಡು ಸಮಾಜಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟ ಸಾಧ್ವಿ’ ಎಂದರು.
‘ಮಹಿಳೆಯರಿಗಾಗಿಯೇ ವಿದ್ಯಾ ಸಂಸ್ಥೆಯನ್ನು ತೆರೆದ ಮಾಹಾಮಾತೆ. ಸ್ತ್ರೀಯರ ಅನಕ್ಷರತೆ, ಅಜ್ಞಾನ ತೊಡೆದು ಸರ್ವಾಂಗೀಣ ಉದ್ಧಾರಕ್ಕೆ ತಮ್ಮನ್ನು ತಾವು ನೀವೇದಿಸಿಕೊಂಡರು. ಮಹಿಳೆಯರ ಸಬಲೀಕರಣದ ಬಗ್ಗೆ ಕಾಳಜಿ ಹೊಂದಿದ್ದರು’ ಎಂದರು.
ಸ್ವದೇಶಿ ಜಾಗರಣ ಮಂಚ್ ಪ್ರಾಂತ ಸಹ ಸಂಯೋಜಕ ಎಸ್.ಸಿ. ಪಾಟೀಲ ಮಾತನಾಡಿ, ಚೀನಾ ವಸ್ತುಗಳ ಮಾರಾಟದಿಂದಾಗುವ ಪರಿಣಾಮಗಳ ಬಗ್ಗೆ ವಿವರಿಸಿದರು.
ಜಯಲಲಿತಾ ಪಾಟೀಲ, ಜ್ಞಾನದೇವ ಪಾಣಿಭಾತೆ, ಶ್ರೀಹರಿರಾವ ಆದವಾನಿ, ಧನ್ಯೋಸ್ಮಿ ಭರತ ಭೂಮಿ ತಂಡದ ರಾಜ್ಯ ಸಂಚಾಲಕ ರಾಮಪ್ರಸಾದ, ಅಶ್ವಿನಿ ತೋಟದ, ಸುರೇಶ ಕೋಡೆಕಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.