ಯಾದಗಿರಿ: ‘ಬೇಲೂರಿನ ಚನ್ನ ಕೇಶವ ದೇವಸ್ಥಾನದ ಆವರಣದಲ್ಲಿ ಜಕಣಾಚಾರಿ ಪ್ರತಿಮೆ ಪ್ರತಿಷ್ಠಾಪಿಸ ಬೇಕು’ ಎಂದು ವಿಶ್ವಕರ್ಮ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಪಿ. ನಂಜುಂಡಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ವಿದ್ಯಾಮಂಗಲ ಮಂದಿರದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಾಗೃತಿ ಸಮಾವೇಶ ದಲ್ಲಿ ಮಾತನಾಡಿದ ಅವರು, ‘ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಎಂದು ವಿವಾದ ಸೃಷ್ಟಿಸಲಾಗಿದೆ.
ವಿಶ್ವಕರ್ಮ ಸಮಾಜ ದಲ್ಲಿ ಒಗ್ಗಟ್ಟಿಲ್ಲ ಎಂಬ ಕಾರಣಕ್ಕೆ ಇಂತಹ ಊಹಾ ಪೋಹಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಬಸವಣ್ಣ, ಕೆಂಪೇಗೌಡ ಅವರುಗಳು ಕಾಲ್ಪನಿಕ ವ್ಯಕ್ತಿ ಎಂದು ವಿವಾದ ಎಬ್ಬಿಸಿದ್ದರೆ ಲಿಂಗಾಯತರು, ಒಕ್ಕಲಿಗರು ಸುಮ್ಮನಿರುತ್ತಿದ್ದರೆ’ ಎಂದು ಪ್ರಶ್ನಿಸಿದರು.
‘ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಅಲ್ಲ ಎಂಬುದಕ್ಕೆ ಆ ಮಹಾಶಿಲ್ಪಿ ನಿರ್ಮಿಸಿದ ಚನ್ನಕೇಶವ ದೇಗುಲ ಸಾಕ್ಷಿಯಾಗಿದೆ. ಆದ್ದರಿಂದ ಚನ್ನಕೇಶವ ದೇಗುಲದ ಆವರಣದಲ್ಲಿಯೇ ಜಕಣಾಚಾರಿ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿದರು.