ಶಹಾಪುರ: ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡು ಭತ್ತದ ಬೆಳೆಯುತ್ತಿದ್ದ ನೆಲದಲ್ಲಿ ಏಲಕ್ಕಿ ಬಾಳೆ ಬೆಳೆದು ತಾಲ್ಲೂಕಿನ ಗೊಲಗೇರಿ ಗ್ರಾಮದ ರೈತ ವೆಂಕಟೇಶ ಕುಲಕರ್ಣಿ ಯಶಸ್ವಿಯಾಗಿದ್ದು, ಇದರು ಇತರ ರೈತರಿಗೆ ಸ್ಫೂರ್ತಿಯಾಗಿದೆ.
‘ಯಾವುದೇ ಬೆಳೆ ಬೆಳೆಯಲು ನೀರಿನ ಸೌಲಭ್ಯ ಉತ್ತಮವಾಗಿ ಇರಬೇಕು. ಕೃಷಿ ಇಲಾಖೆ ಅನುದಾನದಲ್ಲಿ ಜಮೀನಿನಲ್ಲಿ ಕೃಷಿಹೊಂಡ ತೊಡಿಸಿದೆ. ಸಮೃದ್ಧವಾಗಿ ನೀರು ಸಿಕ್ಕಿತು. ತದ ನಂತರ ತೋಟಗಾರಿಕೆ ಇಲಾಖೆ ಸಲಹೆಯಂತೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು 20 ಗುಂಟೆ ಜಮೀನಿನಲ್ಲಿ ಯಾಲಕ್ಕಿ ಬಾಳೆ ನಾಟಿ ಮಾಡಲು ಚಿಂತನೆ ಮಾಡಿದೆ. ಅದಕ್ಕೆ ನನ್ನ ಸಹೋದರ ರಾಘವೇಂದ್ರ ಸಾಥ್ ನೀಡಿದರು’ ಎನ್ನುತ್ತಾರೆ ರೈತ ವೆಂಕಟೇಶ ಕುಲಕರ್ಣಿ.
ಅದರಂತೆ ಜಿ–9 ತಳಿಯ 168 ಸಸಿಗಳನ್ನು ತಂದು ನಾಟಿ ಮಾಡಿದೆವು. ಉತ್ತಮ ಬೆಳೆಯೂ ಬಂದಿದೆ. ₹20 ಸಾವಿರ ಖರ್ಚು ಮಾಡಿದ್ದೇನೆ. 12 ತಿಂಗಳ ಬೆಳೆ ಇದಾಗಿದ್ದು, ಒಂದು ಸಲ ನೆಟ್ಟರೆ ಮೂರು ಬಾರಿ ಬೆಳೆ ತೆಗೆಯಬಹುದು. ದಲ್ಲಾಳಿಗಳು ನೇರವಾಗಿ ತೋಟಕ್ಕೆ ಬಂದು ಖರೀದಿಸಿದ್ದಾರೆ. ₹50 ಸಾವಿರ ಲಾಭ ಬಂದಿದೆ’ ಎಂದು ರಾಘವೇಂದ್ರ ಕುಲಕರ್ಣಿ ಖುಷಿಯಿಂದ ಹೇಳಿದರು.
ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯ ನೆರವಾಗಿದೆ. ವಾಟ್ಸ್ಆ್ಯಪ್ ಮೂಲಕ ಕೃಷಿ ವಿಜ್ಞಾನಿಗಳಿಗೆ ಮಾಹಿತಿ ನೀಡಿದರೆ ರೋಗಗಳ ಬಗ್ಗೆ ಮತ್ತು ಯಾವ ರೀತಿ ನಿರ್ವಹಣೆ ಮಾಡಬೇಕು ಎಂದು ಮಾಹಿತಿ ನೀಡುತ್ತಾರೆ.
ರೈತರು ಈ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮಲ್ಲಿ ಯಾಲಕ್ಕಿ ಬಾಳೆಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ಮಾರುಕಟ್ಟೆ ಕೊರತೆ ಇದೆ. ಹೀಗಾಗಿ ನಗರದ ಎಸ್.ಬಿ.ಐ ಬ್ಯಾಂಕ್ ಎದುರಿನ ಮಳಿಗೆಯೊಂದರಲ್ಲಿ ನಾವೇ ಮಾರಾಟ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಯಾವುದೇ ಬೆಳೆ ಬಿತ್ತನೆ ಮಾಡಿ ಬಂದು ಮನೆಯಲ್ಲಿ ಕುಳಿತರೆ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಎಂತಹ ನೆಲದಲ್ಲಿಯೂ ಉತ್ತಮ ಬೆಳೆ ತೆಗೆಯಬಹುದು ಎಂದು ಅವರು ವಿಶ್ವಾಸದಿಂದ ನುಡಿದರು. ಹೆಚ್ಚಿನ ಮಾಹಿತಿಗೆ ಮೊಬೈಲ್: 81053 35089 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.