ADVERTISEMENT

ಮಹಿಳೆಯ ಮೇಲೆ ದೌರ್ಜನ್ಯ ಬಿಂಬಿಸುವ ಕಡ್ಲಿಮಟ್ಟಿ ಕಾಶಿಬಾಯಿ

​ಪ್ರಜಾವಾಣಿ ವಾರ್ತೆ
Published 5 ಮೇ 2016, 10:33 IST
Last Updated 5 ಮೇ 2016, 10:33 IST

ಶಹಾಪುರ: ಜಾನಪದ ಬೇರುಗಳಲ್ಲಿ ಮೂಡಿ ಬಂದಿರುವ ನೈಜ ಘಟನೆಯ ತಾಜಾತವನ್ನು ಬಿಂಬಿಸುವ ಕಡ್ಲಿಮಟ್ಟಿ ಕಾಶಿಬಾಯಿ ಘಟನಾವಳಿಯ ಕಥನ ಗೀತೆಯನ್ನಾದರಿಸಿ ಬಾಪುಗೌಡ ದರ್ಶನಾಪುರ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಭೂಮಿಕಾ ಸಾಂಸ್ಕೃತಿಕ ಹಬ್ಬದಲ್ಲಿ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ನಿದರ್ಶನದಲ್ಲಿ ನಾಟಕವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ತವರಿಗೆ ಹೋಗಲು ಕಡ್ಲಿಮಟ್ಟಿ ರೈಲ್ವೆ ನಿಲ್ದಾಣಕ್ಕೆ ಬರುವಷ್ಟರಲ್ಲಿ ರೈಲು ನಿರ್ಗಮಿಸಿರುತ್ತದೆ. ರಾತ್ರಿ ಸಮಯದಲ್ಲಿ ತನ್ನೂರಿಗೆ ತೆರಳಲು ಯಾವುದೆ ವಾಹನದ ಸೌಕರ್ಯವಿರುವುದಿಲ್ಲ. ತನ್ನು ಕೂಸಿನೊಂದಿಗೆ ನಿಂತಿರುವಾಗ ಕಾಮುಕ ರೈಲ್ವೆ ನಿಲ್ದಾಣ ಮಾಸ್ತರ ಕಾಶಿಬಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಾನೆ ಆಗ ತನ್ನ ಕರಳು ಬಳ್ಳಿಯನ್ನು ಬಲಿಕೊಟ್ಟು ಶೀಲವನ್ನು ಸಂರಕ್ಷಣೆ ಮಾಡಿಕೊಂಡ ಯಶೋಗಾತೆಯನ್ನು ಜಾನಪದಲ್ಲಿ ಹೆಚ್ಚು ಹೆಸರುವಾಸಿಯಾಗಿದೆ. ಅಂದು ನಡೆದ ಕ್ರೌರ್ಯದ ಪರಮಾವಧಿ ಇಂದಿಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸುವ ಅಸ್ತ್ರವಾಗಿ ನಾವು ನಿಲ್ಲಬೇಕು ಎಂಬ ಸಂದೇಶವನ್ನು ಸಾರಲು ನಾಟಕವನ್ನು ಪ್ರದರ್ಶಿಸಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿನಿಯರು.

ಕಾಶಿಬಾಯಿ ಪಾತ್ರದಲ್ಲಿ  ವಿದ್ಯಾರ್ಥಿನಿ ಮಾನಮ್ಮ, ಪತ್ನಿಯ ಪಾತ್ರದಲ್ಲಿ ಅಂಬಿಕಾ, ರೈಲ್ವೆ ಮಾಸ್ತರರಾಗಿ ಉಮಾಶ್ರೀ, ಚಾಲಕನ ಪಾತ್ರದಲ್ಲಿ ವಿಜಯಲಕ್ಷ್ಮಿ, ಪೊಲೀಸ ಪಾತ್ರದಲ್ಲಿ ಸುವರ್ಣ ಅಭಿನಯಿಸಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಲಿಂಗಣ್ಣ ಸಾಹು, ಶುಭಲಕ್ಷ್ಮಿ ಬಬಲಾದಿ, ಶರಣಯ್ಯಸ್ವಾಮಿ, ರೇವಣಸಿದ್ದಯ್ಯ ಅಂಗಡಿ, ಭೀಮರಾಯ ಭಂಡಾರಿ, ನರ್ಮದ ತುಳೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.