ಯಾದಗಿರಿ: ‘ರೈತರು ಮತ್ತು ವ್ಯಾಪಾರಿಗಳ ನಡುವೆ ಸಾಮರಸ್ಯ ಇಲ್ಲದಿರುವುದರಿಂದ ಸಾಕಷ್ಟು ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳು ರೈತರಿಗೆ ತಲುಪುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಗುರಮಠಕಲ್ ಶಾಸಕ ನಾಗಣ್ಣಗೌಡ ಕಂದಕೂರ ಹೇಳಿದರು.
ನಗರದ ಬಸವೇಶ್ವರ ಗಂಜ್ ಆವರಣದಲ್ಲಿ ಶನಿವಾರ ಜಿಲ್ಲಾ ಗ್ರೀನ್ ಸೀಡ್ಸ್ ಮತ್ತು ಕಾಟನ್ ಮರ್ಚೆಂಟ್ಸ್ ಅಸೋಷಿಯೇಶನ್ ವತಿಯಿಂದ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಆಹಾರ ಧಾನ್ಯಗಳಿಗೆ ಬೆಂಬಲ ಬೆಲೆ ಸರ್ಕಾರದಿಂದ ಸಿಗುತ್ತಿಲ್ಲ. ಅದಕ್ಕಾಗಿ ಸಂಬಂಧಪಟ್ಟ ಸಚಿವರ ಜೊತೆಯಲ್ಲಿ ಮಾತನಾಡಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಾನು ಎಪಿಎಂಸಿ ಅಧ್ಯಕ್ಷನಾಗಿದ್ದಾಗ ವ್ಯಾಪಾರಸ್ಥರು ಮತ್ತು ರೈತರಿಗೆ ಅನುಕೂಲವಾಗುವಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೆ’ ಎಂದು ಅವರು ನೆನಪಿಸಿಕೊಂಡರು.
ಗ್ರೀನ್ ಸೀಡ್ಸ್ ಮತ್ತು ಕಾಟನ್ ಮರ್ಚೆಂಟ್ಸ್ ಅಧ್ಯಕ್ಷ ವಿಶ್ವನಾಥರಡ್ಡಿ ಜೋಳದಡಗಿ ಮಾತನಾಡಿ, ಅಸೋಷಿಯೇಶನ್ ಕಚೇರಿಗೆ ಹೊಂದಿ ಕೊಂಡಿರುವ ಖಾಲಿ ನಿವೇಶನವನ್ನು ಸಂಘದ ಹೆಸರಿಗೆ ಮಾಡಿಕೊಡುವಂತೆ ಶಿಫಾರಸ್ಸು ಮಾಡಲು ಶಾಸಕರಲ್ಲಿ ಮನವಿ ಮಾಡಿದರು.
ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಶರಣಬಸಪ್ಪ ದರ್ಶನಾಪುರ, ನಾಗಣ್ಣಗೌಡ ಕಂದಕೂರ ಅವರನ್ನು ಸನ್ಮಾನಿಸಲಾಯಿತು.
ಅಬ್ಬೆತಮಕೂರಿನ ಸಿದ್ದ ಸಂಸ್ಥಾನ ಮಠದ ಡಾ.ಗಂಗಾಧರ ಸ್ವಾಮೀಜಿ, ಮಾಜಿ ಶಾಸಕರಾದ ವಿರಬಸವಂತರೆಡ್ಡಿ ಮುದ್ನಾಳ, ಡಾ.ಎ.ಬಿ. ಮಾಲಕರಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ಪಾಟೀಲ ತುನ್ನೂರ, ಸಿದ್ದಪ್ಪ ಹೊಟ್ಟಿ, ಶರಣಪ್ಪಗೌಡ ಮಲ್ಹಾರ, ಪಾಂಡುರಂಗ ವ್ಯಾಸ, ದಿನೇಶ ದೋಖಾ, ಪರ್ವತರಡ್ಡಿ ಕೊಲ್ಲೂರ, ಶಿವರಾಜ, ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಪಿ.ನಾಡೇಕರ್, ಅರವಿಂದ ಆಸರ್, ಸೋಮನಾಥ ಜೈನ್, ಅಯ್ಯಣ್ಣ ಹುಂಡೆಕಾರ್, ಭೀಮಣಗೌಡ ಕ್ಯಾತನಾಳ, ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.