ADVERTISEMENT

ಸರ್ವರ್‌ ಅಳವಡಿಕೆ ವಿಳಂಬ: ಜನರ ಪರದಾಟ

ಪಹಣಿ ಪಡೆಯಲು ಅರ್ಧಗಂಟೆ ಕಾಯಬೇಕಾದ ಸ್ಥಿತಿ, ತಪ್ಪದ ಸಾರ್ವಜನಿಕರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:21 IST
Last Updated 18 ಫೆಬ್ರುವರಿ 2017, 6:21 IST
ಗುರುಮಠಕಲ್: ಜಾತಿ, ಆದಾಯ, ಪಹಣಿ, ಗೇಣಿ ಪತ್ರ ಸೇರಿದಂತೆ ಕಂದಾಯ ಹಾಗೂ ಇತರ ಇಲಾಖೆಗಳ ಸುಮಾರು 100 ಸೇವೆಗಳನ್ನು ಅತ್ಯಂತ ಸರಳ, ತ್ವರಿತವಾಗಿ ಪಂಚಾಯಿತಿ ಕೇಂದ್ರಗಳಲ್ಲಿಯೇ ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ‘ಬಾಪೂಜಿ ಸೇವಾ ಕೇಂದ್ರ 100’ ಗಳನ್ನು ಆರಂಭಿಸಲಾಗಿದೆ.
 
ಆದರೆ ಈ ಸೇವಾ ಕೇಂದ್ರಗಳಿಂದ ಜನರಿಗೆ ಅನುಕೂಲವಾಗುತ್ತಿಲ್ಲ. ಬದಲಿಗೆ ಸಾರ್ವಜನಿಕರ ಪರದಾಟ ಇನ್ನೂ ಹೆಚ್ಚಾಗಿದೆ. ಕಳೆದ ಆರು ತಿಂಗಳ ಹಿಂದೆ ಗುರುಮಠಕಲ್ ವ್ಯಾಪ್ತಿಯನ್ನು ಹೊರತುಪಡಿಸಿ ಯಾದಗಿರಿ ಜಿಲ್ಲೆಯ ಎಲ್ಲಾ ಪಂಚಾಯಿತಿಗಳಿಗೆ ಸರ್ವರ್ ಸಂಪರ್ಕಕ್ಕೆ ಅವಶ್ಯವಾಗಿರುವ ಎಲ್ಲಾ ಉಪಕರಣಗಳನ್ನು ಅಳವಡಿಕೆ ಮಾಡಲಾಗಿದೆ.  ಕಾಕಲವಾರ, ಪುಟಪಾಕ, ಚಿನ್ನಾಕಾರ, ಚಪೆಟ್ಲಾ, ಗಾಜರಕೋಟ ಸೇರಿದಂತೆ ಕೆಲವೊಂದು ಪಂಚಾಯಿತಿಗಳಿಗೆ ಇನ್ನೂ ಸಂಪರ್ಕ ಕಲ್ಪಿಸಲಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು ಹೇಳಿದರು.
 
ಚಪೆಟ್ಲಾ, ಕಾಕಲವಾರ ಸೇರಿದಂತೆ ಕೆಲವೊಂದು ಪಂಚಾಯಿತಿಗಳಲ್ಲಿ ‘ಡೇಟಾ ಕಾರ್ಡ್‌’ ಸಂಪರ್ಕವನ್ನು ಪಡೆದು ಕೆಲಸ ಆರಂಭಿಸಲಾಗಿದೆ.  
ಆದರೆ, ಒಂದು ಪಹಣಿ ಪಡೆಯಲು ಸುಮಾರು 20 ರಿಂದ 30 ನಿಮಿಷ ಕಾಯಬೇಕು. ಈ ಬಗ್ಗೆ ಪಂಚಾಯಿತಿಯಲ್ಲಿ ಕೇಳಿದರೆ ಸರ್ವರ್ ಸಮಸ್ಯೆ ಎನ್ನುತ್ತಾರೆ.
 
ಈ ಕೇಂದ್ರಗಳಿಂದ ಜನರಿಗೆ ಯಾವುದೇ ಸಹಾಯ ಆಗುತ್ತಿಲ್ಲ ಎಂದು ಮಲ್ಲಿಕಾರ್ಜುನ, ಕಾಶಪ್ಪ ಪುಟಪಾಕ, ಮಹೇಶ ಅವರ ಅಸಮಧಾನ ವ್ಯಕ್ತಪಡಿಸಿದರು.
ಈ ಕುರಿತು ಪಂಚಾಯಿತಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಾರೆ. ಸರ್ವರ್ ಅಳವಡಿಕೆಯಾಗಿಲ್ಲ. ಡೇಟಾ ಕಾರ್ಡ್ ಮೂಲಕ ಸೇವೆ ನಿಡುತ್ತಿರುವುದರಿಂದ ಹೆಚ್ಚಿನ ಸಮಯ ಹಿಡಿಯುತ್ತಿದೆ. ಅಲ್ಲದೆ, ಸಿಬ್ಬಂದಿ ಕೊರತೆ ಇದೆ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನ ಪಿಡಿಒ ಹಾಗೂ ಸಿಬ್ಬಂದಿ ಬಿಚ್ಚಿಟ್ಟರು.
 
ಸರ್ವರ್ ಅಳವಡಿಕೆಯ ವಿಳಂಬದ ಕುರಿತು ಬಿಎಸ್ಎನ್ಎಲ್ ಕಲಬುರ್ಗಿ ವಿಭಾಗೀಯ ಎಂಜಿನಿಯರ್ ಶಿವರಾಮ ರಾಠೋಡ ಅವರನ್ನು ಸಂಪರ್ಕಿಸಿದಾಗ, ಗುರುಮಠಕಲ್ ಪಟ್ಟಣದಿಂದ ಯಾದ ಗಿರಿಗೆ ಸಂಪರ್ಕ ಕಲ್ಪಿಸುವ ಉಪ ಕರಣಗಳ ಕೊರತೆಯಿತ್ತು. ಉಪ ಕರಣಗಳನ್ನು ತರಿಸಲಾಗಿದೆ. ಒಂದು ವಾರದಲ್ಲಿ ನಮ್ಮ ಕೆಲಸ ಮಾಡುತ್ತೇವೆ. ಉಳಿದಂತೆ ಪಂಚಾಯಿತಿಗಳಲ್ಲಿ ಸರ್ವರ್ ಅಳವಡಿಸಲು ಮಾಡಲು ಯುಟಿಎಲ್ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಮುಂದಿನದು ಅವರ ಕೆಲಸ’ ಎಂದರು.
- ಮಲ್ಲಿಕಾರ್ಜುನ ಪಾಟೀಲ ಚಪೆಟ್ಲಾ
 
* ಸಮಸ್ಯೆಯಾಗದಿರಲಿ ಎನ್ನುವ ಕಾರಣಕ್ಕೆ ಡೇಟಾ ಕಾರ್ಡ್ ಹಚ್ಚಿ ಕೆಲಸ ಮಾಡುತಿದ್ದೇವೆ. ಸೇವೆ ಒದಗಿಸಲು ಹೆಚ್ಚಿನ ಸಮಯ ತಗುಲುತ್ತಿದೆ
- ಬಸವರಾಜ,  ದತ್ತಾಂಶ ನಿರ್ವಾಹಕ.
 
* 100 ಸೇವೆಗಳನ್ನು ನೀಡುವುದಾಗಿ ಸರ್ಕಾರ ಹೇಳಿದೆ. ಒಂದೂ ಸೆವೆಯನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಕೇಳಿದರೆ ಸರ್ವರ್ ಸಮಸ್ಯೆ ಎನ್ನುತ್ತಾರೆ
- ಮಹಾದೇವ ಎಂಟಿಪಲ್ಲಿ, ಸ್ಥಳೀಯ ನಿವಾಸಿ
           
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.