ಸುರಪುರ: ‘ಬಯಲಿನಲ್ಲಿ ಶೌಚಕ್ಕೆ ಹೋಗುವುದರಿಂದ ರೋಗಗಳು ಹರಡುತ್ತವೆ. ಗ್ರಾಮವನ್ನು ಬಯಲು ಶೌಚ ಮುಕ್ತಗೊಳಿಸುವುದು ಎಲ್ಲರ ಹೊಣೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹರಾವ ಕುಲಕರ್ಣಿ ಹೇಳಿದರು.
ತಾಲ್ಲೂಕಿನ ಬೋನ್ಹಾಳ ಗ್ರಾಮದಲ್ಲಿ ಗುರುವಾರ ಶ್ರೀಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಮತ್ತು ತಾಲ್ಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬಯಲು ಶೌಚ ಮುಕ್ತ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಉತ್ತಮ ಆರೋಗ್ಯ ಪಡೆಯಬಹುದು. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಮರಿಲಿಂಗಪ್ಪ ಕರ್ನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು, ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ, ಖಾದರ ಪಟೇಲ್, ಭೀಮಣ್ಣ ನಾಯ್ಕೋಡಿ, ದೇವರಾಜ ಮಕಾಶಿ, ಸಾಹೇಬಗೌಡ, ಶಿವನಾಂದ ಪೇಠಅಮ್ಮಾಪುರ, ಹಣಮಂತ, ಮುಖ್ಯ ಶಿಕ್ಷಕ ಶರಣು ಪಾಕರಡ್ಡಿ, ಸಮಿತಿ ಕಾರ್ಯದರ್ಶಿ ಸಂಗಯ್ಯ ಸ್ವಾಮಿ ಇದ್ದರು.
ಚನ್ನಯ್ಯ ಕಾಡ್ಲೂರುಮಠ ನಿರೂಪಿಸಿ ವಂದಿಸಿದರು. ಶಾಲೆಯ ಮಕ್ಕಳಿಗೆ ಶ್ರೀಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ವತಿಯಿಂದ ಬಿಸಿಯೂಟದ ತಟ್ಟೆಗಳನ್ನು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.