ADVERTISEMENT

ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನಸಂಸ್ಥೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST

ಮಾರ್ಚ್‌ 20ರ ಪ್ರಕಟವಾಗಿದ್ದ ‘ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನಸಂಸ್ಥೆ’ ಈ ಲೇಖನದ ಬಗ್ಗೆ ಪ್ರತಿಕ್ರಿಯೆ. ಈ ಲೇಖನದಲ್ಲಿ ಎರಡು ತಪ್ಪು ಗ್ರಹಿಕೆಗಳಿವೆ.

ಮೊದಲನೆಯದು: ಸ್ವಾಮಿ ವಿವೇಕಾನಂದರ ಆಣತಿಯಂತೆ ಜೆ. ಎನ್. ಟಾಟಾರವರು ಈ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು ಎನ್ನುವುದು. ಇದಕ್ಕೆ ಯಾವ ಆಧಾರಗಳೂ ಇಲ್ಲ. ಶಿಸ್ತು–ಸಂಯಮಗಳ ಕುರಿತು ವಿವೇಕಾನಂದರಿಗೆ ಬರೆದಿರುವ ಪತ್ರದಲ್ಲಿ (ನವೆಂಬರ್ 23, 1898: ಇದರ ಮೂಲಪ್ರತಿ ಇನ್ನೂ ಲಭ್ಯ) ಟಾಟಾರವರು ಈ ಸಂಶೋಧನಾ ಸಂಸ್ಥೆ ಸ್ವಪ್ರೇರಿತವಾದದ್ದು ಎಂದು ನಿಸ್ಸಂದೇಹವಾಗಿ ಉಲ್ಲೇಖಿಸಿದ್ದಾರೆ.

ವಿವೇಕಾನಂದರಿಗೂ ಈ ಸಂಸ್ಥೆಯ ಸ್ಥಾಪನೆಗೂ ಯಾವ ಸಂಬಂಧವೂ ಇಲ್ಲ. ಈ ಸಂಸ್ಥೆಗೆ ಬೇಕಾದ ಜಮೀನನ್ನೂ ಸಹಾಯಧನವನ್ನೂ 1899-1900ರಲ್ಲಿ ಕೊಡಲು ಒಪ್ಪಿದವರು ಆಗಿನ ಮಹಾರಾಣಿಯವರು ಮತ್ತು ದಿವಾನ್ ಶೇಷಾದ್ರಿ ಅಯ್ಯರ್ (ನಾಲ್ವಡಿ ಕೃಷ್ಣರಾಜ ಒಡೆಯರ್ ಸಿಂಹಾಸನಾರೂಢರಾದದ್ದು 1902ರಲ್ಲಿ). 

‌ಎರಡನೆಯದು: ಸಿ.ವಿ. ರಾಮನ್‌ರವರು ಪ್ರಖ್ಯಾತ ಸಂಶೋಧನೆ ಮಾಡಿದ್ದು ಕೋಲ್ಕತ್ತದಲ್ಲಿರುವ ‘ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್’ ಎಂಬ ಸಂಸ್ಥೆಯಲ್ಲಿ. ಈ ವಿಶ್ವವಿಖ್ಯಾತ ಸಂಶೋಧನೆಯನ್ನು ಅವರು ಪ್ರಕಟಿಸಿದ್ದು ಫೆಬ್ರುವರಿ 28, 1928ರಲ್ಲಿ.

ರಾಮನ್ ಅವರಿಗೆ ನೊಬೆಲ್ ಪಾರಿತೋಷಕ ಬಂದದ್ದು 1930ರಲ್ಲಿ. 1933 ರಲ್ಲಿ ಭಾರತೀಯ ವಿಜ್ಞಾನಸಂಸ್ಥೆಗೆ ನಿರ್ದೇಶಕರಾಗಿ ಬೆಂಗಳೂರಿಗೆ ಬಂದರು. ಇಲ್ಲಿ ಪ್ರಪ್ರಥಮವಾಗಿ ಭೌತವಿಜ್ಞಾನ ಪ್ರಯೋಗಾಲಯ  ಸ್ಥಾಪಿಸಿದರು.
–ಬಿ.ವಿ. ಸುಬ್ಬರಾಯಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.