ADVERTISEMENT

1,769 ಅಭ್ಯರ್ಥಿಗಳು, 16.61 ಕೋಟಿ ಮತದಾರರು

ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಇಂದು 5ನೇ ಹಂತದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 20:17 IST
Last Updated 16 ಏಪ್ರಿಲ್ 2014, 20:17 IST
ಮತದಾನಕ್ಕೆ ಸಿದ್ಧವಾಗಿರುವ ಮತಗಟ್ಟೆಗಳು
ಮತದಾನಕ್ಕೆ ಸಿದ್ಧವಾಗಿರುವ ಮತಗಟ್ಟೆಗಳು   

ನವದೆಹಲಿ (ಪಿಟಿಐ): ಒಟ್ಟು 9 ಹಂತಗಳ ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಮುಖ ಹಾಗೂ ಐದನೆಯ ಹಂತ ಗುರುವಾರ ನಡೆಯಲಿದ್ದು, ಕರ್ನಾಟಕದ ಎಲ್ಲ 28 ಸ್ಥಾನಗಳು ಸೇರಿದಂತೆ 12 ರಾಜ್ಯಗಳ ಒಟ್ಟು 121 ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆಮಾಡಲಾಗುತ್ತಿದೆ.

9 ಹಂತಗಳ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವ ಹಂತ ಇದಾಗಿದ್ದು ಕಣದಲ್ಲಿರುವ 1,769 ಅಭ್ಯರ್ಥಿಗಳ ಹಣೆಬರಹವನ್ನು ಒಟ್ಟು 16.61 ಕೋಟಿ ಮತದಾರರು ಬರೆಯಲಿದ್ದಾರೆ.

ರಾಜಸ್ತಾನದ 20, ಮಹಾರಾಷ್ಟ್ರದ 19, ಉತ್ತರ ಪ್ರದೇಶ ಹಾಗೂ ಒಡಿಶಾದ ತಲಾ 11, ಮಧ್ಯ­ಪ್ರದೇಶದ 10, ಬಿಹಾರದ 7, ಜಾರ್ಖಂಡ್‌ನ 6, ಪಶ್ಚಿಮ ಬಂಗಾಳದ 4, ಛತ್ತೀ­ಸ್‌­ಗಡದ 3, ಜಮ್ಮು –ಕಾಶ್ಮೀರ ಹಾಗೂ ಮಣಿ­ಪುರದ ತಲಾ ಒಂದು ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯುತ್ತಿದೆ.

ಈಗಾಗಲೆ 111 ಕ್ಷೇತ್ರಗಳಿಗೆ ನಾಲ್ಕು ಹಂತ­ಗಳಲ್ಲಿ ಮತದಾನವಾಗಿದೆ. ಏ. 10ರಂದು 91 ಕ್ಷೇತ್ರಗಳಿಗೆ ಮತದಾನ ನಡೆದಿದೆ.ಬಿಹಾರದಲ್ಲಿ 117 ಅಭ್ಯರ್ಥಿಗಳು ಕಣ­ದಲ್ಲಿದ್ದರೆ ಉತ್ತರ ಪ್ರದೇಶದಲ್ಲಿ 11 ಕ್ಷೇತ್ರಗಳಿಗೆ 151 ಅಭ್ಯರ್ಥಿಗಳು ಸೆಣಸಾಟ ನಡೆಸಿದ್ದಾರೆ.

ಒಡಿಶಾದಲ್ಲಿ 11 ಲೋಕಸಭಾ ಸ್ಥಾನಗಳ ಜತೆಯಲ್ಲೇ 77 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯುತ್ತಿದೆ. ಜಾರ್ಖಂಡ್‌ನ 6 ಸ್ಥಾನಗಳಿಗೆ ಒಟ್ಟು 106 ಅಭ್ಯರ್ಥಿಗಳು ಕಣದಲ್ಲಿದ್ದರೆ ರಾಜಸ್ತಾನದ 20 ಕ್ಷೇತ್ರಗಳ ವಶಕ್ಕೆ 239 ಅಭ್ಯರ್ಥಿಗಳು ಹೋರಾಟ ನಡೆಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌, ಜಲಪೈ­ಗುರಿ, ಕೂಚ್‌ಬಿಹಾರ್‌ ಹಾಗೂ ಅಲಿಪು­ರ್ದು­ವಾರ್‌ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿಯ ಹತ್ತು ಸ್ಥಾನಗಳಿಗೆ 142 ಜನರಲ್ಲಿ ಸ್ಪರ್ಧೆ ಇದ್ದರೆ, ಜಮ್ಮು –ಕಾಶ್ಮೀರದ ಒಂದು ಸ್ಥಾನದ ಪ್ರತಿನಿಧಿಯನ್ನು 14 ಲಕ್ಷ ಮತದಾರರು ನಿರ್ಧರಿಸುವರು. ಮಣಿಪುರದಲ್ಲೂ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು ಇಲ್ಲಿ 8 ಜನ ಕಣದಲ್ಲಿದ್ದಾರೆ.

ಕಣದಲ್ಲಿರುವ ಪ್ರಮುಖರು
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಗಳಾದ ಎಚ್‌.ಡಿ. ಕುಮಾರಸ್ವಾಮಿ.  ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಮಾಜಿ ಕೇಂದ್ರ ಸಚಿವರಾದ ಅನಂತಕುಮಾರ್‌, ಮೇನಕಾ ಗಾಂಧಿ, ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಗೋಪಿನಾಥ ಮುಂಡೆ (ಬಿಜೆಪಿ).

ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೋಯಿಲಿ, ಅಶೋಕ್‌ ಚವಾಣ್‌, ಕೇಂದ್ರ ಸಚಿವ ಶ್ರೀಕಾಂತ ಜೆನಾ, ಮಾಜಿ ಕೇಂದ್ರ ಸಚಿವ ಸುಬೋಧ್‌ ಕಾಂತ್‌ ಸಹಾಯ್‌, ಕೇಂದ್ರ ಗೃಹ ಸಚಿವ ಸುಶೀಲಕುಮಾರ್‌ ಶಿಂಧೆ (ಕಾಂಗ್ರೆಸ್‌).

ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಪುತ್ರಿ ಮಿಸಾ ಭಾರ್ತಿ (ಆರ್‌ಜೆಡಿ), ಕೇಂದ್ರ ಸಚಿವ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ (ಎನ್‌ಸಿಪಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT