ಮೈಸೂರು: ಚುನಾವಣಾ ದಿನ ಮತ್ತು ಅದರ ಮುನ್ನಾದಿನದಂದು ಮತದಾರರಲ್ಲದವರು ತಮ್ಮ ಲೋಕಸಭಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಇರಬಾರದು ಎಂಬ ನಿಯಮವನ್ನು ಚುನಾವಣಾ ಆಯೋಗವು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ತಮ್ಮ ತವರೂರು ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬುಧವಾರ ಸಂಜೆ ಬಿಜೆಪಿ ಕಾರ್ಯಕರ್ತರು ಮೈಸೂರಿನಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವುದು ಮಾದರಿ ನೀತಿಸಂಹಿತೆಯ ಉಲ್ಲಂಘನೆ ಎಂದು ಖಂಡಿಸಿ ಪ್ರತಿಭಟಿಸಿದ್ದರು. ಇದರಿಂದ ಚುನಾವಣಾ ಅಯೋಗದ ನಿರ್ದೇಶನದಂತೆ ಸಿದ್ದರಾಮಯ್ಯ ಕೂಡಲೇ ಬೆಂಗಳೂರಿಗೆ ತೆರಳಿದ್ದರು.
‘ನನ್ನ ಸ್ವಂತ ಮನೆಯು ಮೈಸೂರಿನಲ್ಲಿದೆ. ಅಲ್ಲಿರದೇ ಎಲ್ಲಿ ಇರಲಿ? ಆಯೋಗವು ಈ ಬಗ್ಗೆ ತಪ್ಪು ಗ್ರಹಿಕೆಯಲ್ಲಿದೆ. ಈ ಬಗ್ಗೆ ದೊಡ್ಡ ವಿವಾದ ಮಾಡುವುದು ಬೇಡ’ ಎಂದರು.
‘ಬಿಜೆಪಿ ತನಗಿರುವ ಸಾಮರ್ಥ್ಯವನ್ನು ಅತಿರಂಜಿತವಾಗಿ ಪ್ರದರ್ಶಿಸುತ್ತಿದೆ. ನಾನು ಮೊದಲೇ ಹೇಳಿದಂತೆ 19–20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ಖಚಿತ. ಮೇ 16ಕ್ಕೆ ಎಲ್ಲವೂ ಬಹಿರಂಗವಾಗಲಿದೆ’ ಎಂದರು.
ಗುರುವಾರ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಅವರು, ಶಾರದಾದೇವಿನಗರದ ಮನೆಗೆ ತೆರಳಿದರು. ನಂತರ ಮಧ್ಯಾಹ್ನ ಸಿದ್ದರಾಮನಹುಂಡಿಗೆ ತೆರಳಿ ಮತದಾನ ಮಾಡಿದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ತಮ್ಮ ತವರೂರಿಗೆ ಹೋಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.