ADVERTISEMENT

ಮಹದಾಯಿ: ಬೆಂಕಿ ಹಚ್ಚಿದ್ದು ಯಾರು?

ವಿವಾದ ಸಂಬಂಧ ಸರಣಿ ಟ್ವೀಟ್‌ ಮಾಡಿದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:45 IST
Last Updated 8 ಫೆಬ್ರುವರಿ 2018, 9:45 IST
ಮಹದಾಯಿ:  ಬೆಂಕಿ ಹಚ್ಚಿದ್ದು ಯಾರು?
ಮಹದಾಯಿ: ಬೆಂಕಿ ಹಚ್ಚಿದ್ದು ಯಾರು?   

ಬೆಂಗಳೂರು: ‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಆಸಕ್ತಿ ತೋರಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಾದಿ ತಪ್ಪುವಂತೆ ಮಾಡಿದರು’ ಎಂದು ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ದೂರಿದ್ದಾರೆ.

ಈ ಸಂಬಂಧ ಯಡಿಯೂರಪ್ಪ ಸರಣಿ ಟ್ವೀಟ್‌ ಮಾಡಿದ್ದಾರೆ. ಎರಡು ಟ್ವೀಟ್‌ಗಳ ಸಾರಾಂಶ ಹೀಗಿದೆ–

‘ಕುಡಿಯುವ ನೀರಿಗಾಗಿ ಅಗತ್ಯವಿರುವ 7.56 ಟಿಎಂಸಿ ಅಡಿ ನೀರು ಬಿಡಲು  ತಾತ್ವಿಕವಾಗಿ ಸಿದ್ಧವಿರುವುದಾಗಿ ಗೋವಾ ಹೇಳಿದೆ. ಆದರೆ, ನೀವು 14 ಟಿಎಂಸಿ ಅಡಿ ನೀರಿನ ಬಗ್ಗೆ ಮಾತುಕತೆ ಎನ್ನುತ್ತೀರಿ. ಇದರ ಜೊತೆಗೆ ಗೋವಾ ಕಾಂಗ್ರೆಸಿ
ಗರು ನೀರು ಬಿಡಬಾರದು ಎಂದು ಹೋರಾಟ ಮಾಡುತ್ತಿದ್ದಾರೆ. ಬೆಂಕಿ ಹಚ್ಚಿದವರು ಯಾರು? ಇವೆಲ್ಲ ರಾಜ್ಯದ ಜನತೆ ಗೊತ್ತಿಲ್ಲವೆಂದು ಭಾವಿಸಿದ್ದೀರಾ?’

ADVERTISEMENT

‘ನೀವು ಮಾಡಿದ ತಪ್ಪಿಗೆ ನಮ್ಮನ್ಯಾಕೆ ನಮ್ಮನ್ನು ದೂರುತ್ತೀರಾ? ಕುಡಿಯುವ ನೀರು ಬಿಡುವ ಬಗ್ಗೆ ಗೋವಾ ಮುಖ್ಯಮಂತ್ರಿಯಿಂದ ಒಪ್ಪಿಗೆ ಪಡೆದರೆ, ನೀವು ಸಂಪೂರ್ಣ ನೀರು ಬಿಡಬೇಕು ಎಂದು ಕೇಳಿದಿರಿ. ಒಂದೇ ಸಭೆಯಲ್ಲಿ ಇತ್ಯರ್ಥ ಮಾಡಬೇಕು ಎಂದು ಷರತ್ತು ಹಾಕಿದಿರಿ. ಇದೆಲ್ಲ ಮಾಡಿದ್ದು ಜನರ ಹಿತದೃಷ್ಟಿಯಿಂದಲಾ? ರಾಜಕೀಯ ಲಾಭಕ್ಕಾ? ಎಂಬುದನ್ನು ವಿವರಿಸಿ ಪಾಟೀಲರೇ’ ಎಂದು ಚುಚ್ಚಿದ್ದಾರೆ.

‘ಗೋವಾ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ’

ಗೋವಾ ರಾಜ್ಯ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇದೇ ಧೋರಣೆ ಮುಂದುವರಿಸಿದರೆ, ಆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಗೋವಾ ಮಂತ್ರಿಗಳು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಅಲ್ಲಿನ ಆರ್ಥಿಕ ವ್ಯವಸ್ಥೆ ಕರ್ನಾಟಕವನ್ನು ಅವಲಂಬಿಸಿದೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಮಹದಾಯಿ ವಿಚಾರದಲ್ಲಿ ಹುಡುಗಾಟ ಆಡುತ್ತಿದ್ದಾರೆ. ಬಿಜೆಪಿಯ 17 ಸಂಸದರು ರಾಜ್ಯದ ಹಿತ ಕಾಪಾಡುವಲ್ಲಿ  ವಿಫಲರಾಗಿದ್ದಾರೆ. ಪ್ರಧಾನಿಯವರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

‘ಮಹದಾಯಿ ವಿಚಾರದಲ್ಲಿ ಕರ್ನಾಟಕ ಎಚ್ಚರಿಕೆಯ ಹೆಜ್ಜೆ ಇಡಬೇಕು. ನಮ್ಮ ಕಡೆಯಿಂದ ಯಾವುದೇ ತಪ್ಪು ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಕಾನೂನು ತಜ್ಞರು ಎಚ್ಚರಿಕೆವಹಿಸಿ ನ್ಯಾಯಮಂಡಳಿ ಮುಂದೆ ವಾದ ಮಂಡಿಸಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.