ನೀನಾಸಂ ಸತೀಶ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ‘ಗೋದ್ರಾ’ ಚಿತ್ರದ ಎರಡನೆಯ ಹಂತದ ಚಿತ್ರೀಕರಣಕ್ಕಾಗಿ ಚಿತ್ರತಂಡ ಮಂಗಳೂರು ಮತ್ತು ಕಾಸರಗೋಡು ಕಡೆಗೆ ಪ್ರಯಾಣ ಬೆಳೆಸಿದೆ. ಎರಡನೆಯ ಹಂತದ ಚಿತ್ರೀಕರಣ ಬುಧವಾರದಿಂದಲೇ (ಡಿ. 20) ಆರಂಭವಾಗಿದೆಯಂತೆ.
‘ಎಂದೂ ಮುಗಿಯದ ಯುದ್ಧ’ ಎಂಬ ಅಡಿಶೀರ್ಷಿಕೆಯನ್ನು ಈ ಸಿನಿಮಾಕ್ಕೆ ನೀಡಲಾಗಿದೆ. ಈ ಸಿನಿಮಾದಲ್ಲಿ ನಟಿಸುತ್ತಿರುವ ವಸಿಷ್ಠ ಸಿಂಹ ಅವರ ಜೊತೆಯಾಗಿ ಬೆಂಗಳೂರಿನ ಬೆಡಗಿ ರಕ್ಷಾ ಸೋಮಶೇಖರ್ ನಟಿಸಲಿದ್ದಾರೆ.
ಈ ಸಿನಿಮಾದ ಹೆಸರು ‘ಗೋದ್ರಾ’ ಎಂದಾಗಿದ್ದರೂ, ಇದು ಗುಜರಾತಿನ ಗೋದ್ರಾದಲ್ಲಿ 2002ರಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದ ಸಿನಿಮಾ ಅಲ್ಲವೇ ಅಲ್ಲ ಎಂದು ಚಿತ್ರತಂಡ ಈಗಾಗಲೇ ಸ್ಪಷ್ಟಪಡಿಸಿದೆ.
ಇದನ್ನು ಪ್ರಯೋಗಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾ ಎಂದು ನಿರ್ದೇಶಕ ಕೆ.ಎಸ್. ನಂದೀಶ್ ಹೇಳಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಮಕಥೆಯನ್ನು ಅವರು ಹೇಳಲಿದ್ದಾರೆ. ಸಿನಿಮಾದ ಚಿತ್ರೀಕರಣವು ಉತ್ತರ ಭಾರತದಲ್ಲಿ ಕೂಡ ನಡೆಯಲಿದೆ.
‘ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ಶ್ರದ್ಧಾ ಅವರು ಕಾಲೇಜೊಂದರಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಾಗಿರುತ್ತಾರೆ, ಇಬ್ಬರೂ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳನ್ನು ಕಂಡು ಇವರು ಕ್ರಾಂತಿಕಾರಿಗಳಾಗಿ ಬದಲಾಗುತ್ತಾರೆ’ ಎಂದು ನಂದೀಶ್ ಅವರು ಈಗಾಗಲೇ ಕಥೆಯ ಎಳೆಯೊಂದನ್ನು ಬಿಟ್ಟುಕೊಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.