ADVERTISEMENT

ಉಪ್ಪಿ ಅಭಿಮಾನಿ ಜಯಶ್ರೀ!

ವಿಜಯ್ ಜೋಷಿ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಜಯಶ್ರೀ
ಜಯಶ್ರೀ   

‘ಉಪ್ಪು ಹುಳಿ ಖಾರ’ ಸಿನಿಮಾ ಮೂಲಕ ಹಿರಿತೆರೆಗೆ ಬಂದಿರುವವರು ಜಯಶ್ರೀ ರಾಮಯ್ಯ. ‘ನಾನು ಸ್ವಲ್ಪ ತರಲೆ ಹುಡುಗಿ’ ಎಂದೇ ಹೇಳಿಕೊಳ್ಳುವ ಜಯಶ್ರೀ ಅವರಿಗೆ ತರಲೆ ಪಾತ್ರಗಳು ಬಹಳ ಇಷ್ಟವಂತೆ. ಹಾಗೆಯೇ, ಉಪೇಂದ್ರ ಅವರ ಅಭಿಮಾನಿಯೂ ಹೌದು ಇವರು. ತಮ್ಮ ಸಿನಿಮಾ ಯಾನದ ಬಗ್ಗೆ ಅವರು ‘ಚಂದನವನ’ದ ಜೊತೆ ಮಾತನಾಡಿದ್ದಾರೆ.

‘ಬಿಗ್‌ಬಾಸ್‌ಗೆ ಮಾಡೆಲ್‌ ಆಗಿ ಹೋಗುತ್ತೀರಾ ಎಂದು ಪ್ರವೀಣ ಎನ್ನುವವರು ಕೇಳಿದರು. ನಾನು ಅದಕ್ಕೂ ಮೊದಲು ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಬಿಗ್‌ ಬಾಸ್‌ಗೆ ಪ್ರಯತ್ನಿಸುವೆ ಎಂದು ಹೇಳಿದೆ. ಆ ರಿಯಾಲಿಟಿ ಕಾರ್ಯಕ್ರಮದಲ್ಲಿ ನಾನು ಆಯ್ಕೆಯಾದೆ. ಅಲ್ಲಿಂದ ಹೊರಬಂದ ನಂತರ ಕೆಲವು ಅವಕಾಶಗಳು ಬಂದವು. ಆದರೆ ಅವುಗಳನ್ನು ಒಪ್ಪಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ತೀರ್ಮಾನಿಸಿರಲಿಲ್ಲ. ಕೆಲವು ಅವಕಾಶಗಳು ಇಷ್ಟವಾಗಿರಲಿಲ್ಲ. ಆಗ ಸಿಕ್ಕಿದ್ದು ಈ ಸಿನಿಮಾದಲ್ಲಿ ನಟಿಸುವ ಅವಕಾಶ’ ಎನ್ನುತ್ತಾರೆ ಜಯಶ್ರೀ.

‘ಇಮ್ರಾನ್ ಸರ್ದಾರಿಯಾ ಅವರನ್ನು ಭೇಟಿ ಮಾಡಿದೆ. ಉಪ್ಪು ಹುಳಿ ಖಾರ ಸಿನಿಮಾಕ್ಕೆ ಆಯ್ಕೆಯಾದ ನಂತರ, ಶಿರಾಡಿ ಘಾಟ್ ಎನ್ನುವ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ಆ ಸಿನಿಮಾದವರೂ ನನ್ನ ‍ಪ್ರೊಫೈಲ್‌ ನೋಡಿಯೇ ಆಯ್ಕೆ ಮಾಡಿದರು. ಈಗ ಆ ಸಿನಿಮಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು.

ADVERTISEMENT

ಅಂದಹಾಗೆ, ಜಯಶ್ರೀ ಅವರದ್ದು ಸಿನಿಮಾ ಹಿನ್ನೆಲೆ ಇರುವ ಕುಟುಂಬ ಅಲ್ಲ. ‘ನೀವು ಸಿನಿಮಾ ಕಡೆ ಆಕರ್ಷಿತವಾಗಿದ್ದು ಹೇಗೆ’ ಎಂದು ಪ್ರಶ್ನಿಸಿದಾಗ, ‘ನಮ್ಮದು ಮಧ್ಯಮ ವರ್ಗದ ಕುಟುಂಬ. ಹಾಗಾಗಿ, ಮೊದಲು ನಾನು ಶಿಕ್ಷಣ ಪೂರ್ಣಗೊಳಿಸಬೇಕಿತ್ತು. ಸಿನಿಮಾ ವಿಚಾರದಲ್ಲಿ ಅಷ್ಟೇನೂ ಬೆಂಬಲ ಇರಲಿಲ್ಲ. ಬಿಗ್‌ ಬಾಸ್‌ನಲ್ಲಿ ಸಿಕ್ಕ ಅವಕಾಶ ನನ್ನ ಪಾಲಿನ ಟರ್ನಿಂಗ್ ಪಾಯಿಂಟ್. ಬಿಗ್‌ ಬಾಸ್‌ ಮೂಲಕ ನನಗೆ ಸಿನಿಮಾ ಜಗತ್ತಿನ ಸಂಪರ್ಕ ದೊರೆಯಿತು. ಸಿನಿಮಾ ಲೋಕದ ಜನ ನನ್ನನ್ನು ಗುರುತಿಸಿದರು’ ಎನ್ನುತ್ತಾರೆ ಜಯಶ್ರೀ.

ಇದರ ಜೊತೆಯಲ್ಲೇ ‘ಈಗ ಸಿಕ್ಕಿರುವ ಸಿನಿಮಾಗಳು ನಾನು ಬಿಗ್‌ ಬಾಸ್‌ನಲ್ಲಿ ಇದ್ದೆ ಎಂಬ ಒಂದೇ ಕಾರಣಕ್ಕೆ ಸಿಕ್ಕಿಲ್ಲ. ನಾನು ಈ ಸಿನಿಮಾಗಳಿಗೆ ಆಯ್ಕೆಯಾಗಿದ್ದು ನನ್ನ ಪ್ರತಿಭೆಯ ಕಾರಣದಿಂದ’ ಎನ್ನುತ್ತಾರೆ ಅವರು.

ಜಯಶ್ರೀ ಅವರು ನಟನೆಯ ಬಗ್ಗೆ ವಿಶೇಷ ತರಬೇತಿಯನ್ನೇನೂ ಪಡೆದವರಲ್ಲ. ‘ಬೇರೆಯವರು ನಟಿಸುವುದನ್ನು ಟಿ.ವಿ. ಮೂಲಕ ಗಮನಿಸುತ್ತಿದ್ದೆ, ಅಷ್ಟೇ’ ಎನ್ನುವುದು ಅವರು ಹೇಳುವ ಮಾತು.

‘ನಾನು ತುಂಬಾ ಓದಿದ್ದರೆ ನನ್ನ ಸಮಯ ವ್ಯರ್ಥವಾಗಿಬಿಡುತ್ತಿತ್ತು. ನಾನು ಈಗ ಈ ಹಂತಕ್ಕೆ ಬೆಳೆದಿರುತ್ತಿರಲಿಲ್ಲ. ಕೆಲವೊಮ್ಮೆ, ನಾನು ಸಿನಿಮಾ ರಂಗಕ್ಕೆ ತಡವಾಗಿ ಬಂದೆನೇನೋ ಅಂತಲೂ ಅನಿಸುತ್ತದೆ. ಆದರೂ ತೊಂದರೆ ಇಲ್ಲ. ದೇವರು ಏನು ಅಂದುಕೊಳ್ಳುತ್ತಾನೋ ಹಾಗೇ ಆಗುತ್ತದೆ. ನನ್ನ ಜೀವನದಲ್ಲಿ ಕೆಟ್ಟದ್ದು ಅಂತ ಏನೂ ಆಗಿಲ್ಲ’ ಎಂಬ ಮಾತನ್ನು ಖುಷಿಯಿಂದ ಹೇಳುತ್ತಾರೆ.

ಜಯಶ್ರೀ ಅವರಿಗೆ ತರಲೆ ಮಾಡುವ ಪಾತ್ರಗಳಂತೆಯೇ, ಮೂಗಿಯ ಪಾತ್ರ ಕೂಡ ಇಷ್ಟವಂತೆ. ಹಾರರ್, ಕಾಮಿಡಿ ಸಿನಿಮಾಗಳು ಅವರಿಗೆ ಬಹಳ ಇಷ್ಟ. ಆದರೆ ಲವ್‌ ಸ್ಟೋರಿ ಇಷ್ಟವಿಲ್ಲ. ಲವ್‌ ಸ್ಟೋರಿ ಯಾಕೆ ಇಷ್ಟವಿಲ್ಲ ಎಂದು ಪ್ರಶ್ನಿಸಿದರೆ, ‘ಲವ್ ಸ್ಟೋರಿಗಳಲ್ಲಿ ಒಂದೋ ಗೋಳು ಇರುತ್ತದೆ ಅಥವಾ ಹ್ಯಾಪಿ ಎಂಡಿಂಗ್ ಇರುತ್ತದೆ. ಇಂಥ ಸಿನಿಮಾಗಳು ಬೋರಾಗಿವೆ. ಅದ್ಭುತ ಲವ್ ಸ್ಟೋರಿ ಆದರೆ ಪರವಾಗಿಲ್ಲ. ಅಷ್ಟಕ್ಕೂ, ಲವ್ ಸ್ಟೋರಿಗಳು ನಮ್ಮ ತಲೆಮಾರಿನವರಿಗೆ ಅಷ್ಟೇನೂ ಆಸಕ್ತಿ ಮೂಡಿಸುತ್ತಿಲ್ಲ’ ಎಂಬ ಉತ್ತರ ನೀಡುತ್ತಾರೆ.

ಜಯಶ್ರೀ ಅವರು ‘ನಾನು ನಿಮ್ಮ ಅಭಿಮಾನಿ’ ಎಂದು ಉಪೇಂದ್ರ ಅವರಲ್ಲಿ ಹೇಳಿದ್ದರಂತೆ. ಅದಕ್ಕೆ ಉಪೇಂದ್ರ ಅವರು, ‘ಬಿಗ್‌ ಬಾಸ್ ನೋಡಿ ನಾನೇ ನಿಮ್ಮ ಅಭಿಮಾನಿಯಾದೆ’ ಉತ್ತರ ನೀಡಿದ್ದರಂತೆ. ‘ನಟನಾಗಿ, ನಿರ್ದೇಶಕನಾಗಿ ನನಗೆ ಉಪೇಂದ್ರ ಬಹಳ ಇಷ್ಟವಾಗುತ್ತಾರೆ. ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ನನ್ನ ಕನಸೊಂದು ನನಸಾದಂತೆ’ ಎಂದರು ಜಯಶ್ರೀ.

*
ಐತಿಹಾಸಿಕ ಕಥೆ ಇರುವ ಸಿನಿಮಾ ನನಗೆ ಬಹಳ ಇಷ್ಟ. ಹಾಗೆಯೇ ಪೌರಾಣಿಕ ಕಥೆಗಳೂ ಇಷ್ಟ. ಸೀತೆಯ ಪಾತ್ರ ಮಾಡಬೇಕು ಎಂಬುದು ನನ್ನಾಸೆ.

ಜಯಶ್ರೀ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.