‘ಈ ಸಿನಿಮಾಕ್ಕೆ ಆಸ್ಕರ್ ಅವಾರ್ಡ್ ನಿರೀಕ್ಷೆ ಇದೆ. ಖಂಡಿತ ಆಸ್ಕರ್ ದೊರೆಯುತ್ತದೆ ಎಂದಿದ್ದಾರೆ ನಮ್ಮ ಅಣ್ಣ! ಅದಕ್ಕಿಂತಲೂ ದೊಡ್ಡ ಪ್ರಶಸ್ತಿಯೂ ಬರುತ್ತದೆ ಎಂದಿದ್ದಾರೆ. ಆ ದೊಡ್ಡ ಪ್ರಶಸ್ತಿಯೇ ಜನರ ಅಭಿಮಾನ’– ಹೀಗೆ ತಮ್ಮ ಚಿತ್ರಕ್ಕೆ ಆಸ್ಕರ್ ದೊರೆಯುವ ಕನಸನ್ನು ಇಟ್ಟುಕೊಂಡಿರುವವರು ಕೃಷ್ಣೇಂದ್ರ ಪಂಡಿತ್.
ಪಂಡಿತ್ ಅವರನ್ನು ‘ದಶಾವತಾರಿ’ ಎನ್ನಬಹುದು. ‘ಪಂಡಿತ ಭಾಗ್ಯವಿಧಾತ’ ಎನ್ನುವ ಚಿತ್ರದಲ್ಲಿ ಹತ್ತು ರೂಪಗಳಲ್ಲಿ (ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ, ಸಂಗೀತ, ಸಾಹಿತ್ಯ, ಗಾಯನ, ನಿರ್ಮಾಪಕ, ನಿರ್ದೇಶಕ, ನಾಯಕ) ಕಾಣಿಸಿಕೊಂಡಿರುವ ಸಾಹಸ ಅವರದು. ಇವುಗಳಲ್ಲಿ ಯಾವ ವಿಭಾಗದಲ್ಲಿ ಆಸ್ಕರ್ ದೊರೆಯುತ್ತದೆ ಎನ್ನುವುದು ಸದ್ಯಕ್ಕೆ ಗುಟ್ಟು!
‘ಕಡ್ಡಾಯವಾಗಿ ದೇಶಪ್ರೇಮಿಗಳಿಗೆ ಮಾತ್ರ’ ಎನ್ನುವುದು ‘ಪಂಡಿತ ಭಾಗ್ಯವಿಧಾತ’ ಚಿತ್ರದ ಟ್ಯಾಗ್ಲೈನ್. ಈ ಅಡಿ ಬರಹವೇ ಸಿನಿಮಾ ಕಥೆಯಲ್ಲಿನ ದೇಶಪ್ರೇಮವನ್ನು ಸೂಚಿಸು ವಂತಿದೆ. ‘ಸುಂದರ ಸಮಾಜ ನಿರ್ಮಾಣದ ಕನಸಿನಲ್ಲಿ ಚಿತ್ರವಿದೆ. ಮಚ್ಚು– ಲಾಂಗು– ಅಶ್ಲೀಲತೆ ಇಲ್ಲ. ಬಾಲ್ಯದಿಂದಲೇ ನನ್ನಲ್ಲಿ ದೇಶಭಕ್ತಿ ಬೆಳೆಸಿದ್ದು ಅಮ್ಮ. ಆ ಪ್ರೇರಣೆಯಲ್ಲಿ ದೇಶಭಕ್ತಿಯ ವಿಷಯವಾಗಿ ಸಿನಿಮಾ ಮಾಡಿ ದ್ದೇನೆ’ ಎಂದು ತಮ್ಮ ಬಾಲ್ಯದ ಗಳಿಗೆಗಳನ್ನು ಪಂಡಿತ್ ಚಪ್ಪರಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಈಗಾಗಲೇ ಪಂಡಿತರ ಚಿತ್ರ ವೀಕ್ಷಿಸಿರುವ ಅವರು– ‘ನಾನು ರಾಜಕುಮಾರ್ ಅವರ ಚಿತ್ರಗಳನ್ನು ನೋಡಿದ್ದೇನೆ. ಆ ಮೇಲೆ ಸಿನಿಮಾ ನೋಡಿಲ್ಲ. ನಾನು ವಿಮರ್ಶಕನೂ ಅಲ್ಲ. ಈ ಸಿನಿಮಾದ ಮೊದಲ ಭಾಗ ಹೆಚ್ಚು ಹಿಡಿಸಿದೆ. ಕಥೆಯಲ್ಲಿನ ಪರಿವರ್ತನೆಯ ವಿಷಯ ನನಗೆ ಇಷ್ಟವಾಯಿತು’ ಎಂದರು.
ಪಂಡಿತ್, ಆರ್ಥಿಕ ಸಂಕಷ್ಟದಲ್ಲಿದ್ದಾಗ ಚಿತ್ರಕ್ಕೆ ಅವರ ಸ್ನೇಹಿತರಾದ ಮಲ್ಲೇಶ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರಂತೆ. ಮಲ್ಲೇಶ್ ಹಾಗೂ ಅವರ ಗೆಳೆಯರಾದ ಅಶೋಕ್, ಶಿವಕುಮಾರ್, ‘ಇದು ಸಂದೇಶವಿ ರುವ ಭಾವನಾತ್ಮಕ ಚಿತ್ರ ಇದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.