ರಾಮಾಯಣ ಉತ್ಕೃಷ್ಟ ಕಾವ್ಯ. ವಿಶ್ವದಲ್ಲಿ ಒಂದಿಲ್ಲೊಂದು ರೂಪ, ಸ್ವರೂಪದಲ್ಲಿ ಪ್ರತಿಕ್ಷಣವೂ ಧ್ವನಿಸುತ್ತಲೇ ಇರುತ್ತದೆ. ಭಾಷಾತೀತವಾಗಿರುವ ಈ ಕಾವ್ಯವನ್ನು ಎಸ್.ಎಲ್.ಎನ್. ಸ್ವಾಮಿ ಅವರು, ‘ಪುರುಷೋತ್ತಮ ಪರ್ವ’ ಎಂಬ ನಾಟಕದ ಧ್ವನಿಮುದ್ರಿಕೆ ರೂಪಿಸಿದ್ದಾರೆ.
ಇದು ಸಂಪೂರ್ಣ ರಾಮಾಯಣದ ಕನ್ನಡದ ಪ್ರಪ್ರಥಮ ವಿಸ್ತೃತ ನಾಟಕ ಎನ್ನುವುದು ಲೇಖಕರ ಹೇಳಿಕೆ. ಇತ್ತೀಚೆಗೆ ಡಾ.ಪಾವಗಡ ಪ್ರಕಾಶ್ ರಾವ್ ಈ ಧ್ವನಿಮುದ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಕ್ಷಣಕ್ಕೆ ಆನಂದ ಗುರೂಜಿ, ಪ್ರಮೋದ್ ಮುತಾಲಿಕ್, ಪ್ರೊ.ಕೆ.ಪಿ. ಪುತ್ತೂರಾಯ, ನಟ ಅನಿರುದ್ಧ್ ಸಾಕ್ಷಿಯಾದರು.
ಇದು ಒಂದು ಸಾವಿರ ನಿಮಿಷಗಳ ಅವಧಿಯ ನಾಟಕವಾಗಿದೆ. ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಲ್ಲಿನ ರಾಮನ ಅವತಾರ, ಅವನ ಮೂಲ ನೆಲೆ, ಅಹಲ್ಯೆಯ ಶಾಪ ವಿಮೋಚನೆ, ಸೀತಾ ಸ್ವಯಂವರ, ರಾವಣ, ಹನುಮಂತ, ಸುಗ್ರೀವ, ಭರತನ ಚರಿತ್ರೆಯು ಈ ನಾಟಕದಲ್ಲಿ ದಾಖಲಿಸಲಾಗಿದೆ. ದಶರಥನ ಆಸ್ಥಾನದಿಂದ ಪ್ರಾರಂಭವಾಗುವ ಕಥೆಯು ಶ್ರೀರಾಮನ ಪಟ್ಟಾಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ.
ನಾಟಕದ ರಚನೆ, ನಿರ್ದೇಶನ ಮಾಡಿರುವ ಸ್ವಾಮಿ ಅವರೇ ಶ್ರೀರಾಮನ ಪಾತ್ರಕ್ಕೆ ಧ್ವನಿಯಾಗಿದ್ದಾರೆ. ಕೌಸಲ್ಯೆ ಪಾತ್ರಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಕಂಠದಾನ ಮಾಡಿದ್ದಾರೆ. ದಿ.ವಜ್ರಮುನಿ ಅವರ ಸಂಬಂಧಿ ರಂಗಸ್ವಾಮಿ, ದಿ.ಉದಯಕುಮಾರ್ ಅವರ ಮೊಮ್ಮಗ ಉದಯ್ ಗುರುಚರಣ್ ಸೇರಿದಂತೆ ರಂಗಭೂಮಿಯ ಹಲವು ಕಲಾವಿದರು ಕಂಠದಾನ ಮಾಡಿದ್ದಾರೆ.
ವಿನಯ್ಗೌಡ ಮುಖ್ಯಸ್ಥರಾಗಿರುವ ಮಾತೃಶ್ರೀ ಎಂಟರ್ ಪ್ರೈಸಸ್ ಲಾಂಛನದಡಿ ನಿರ್ಮಿಸಿರುವ ಸಿಂಹಭೂಮಿ ಪ್ರಸ್ತುತಿಯ ಈ ಧ್ವನಿಮುದ್ರಿಕೆಯನ್ನು ಸಿ ಮ್ಯೂಸಿಕ್ ಸಂಸ್ಥೆ ಹೂರತಂದಿದೆ. ಡಾ.ವಿಷ್ಣುವರ್ದನ್ ಅವರಿಗೆ ಈ ಸ್ವರ ಕಾವ್ಯ ಅರ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.